ಯುವ ಸಾಧಕರ ಸಂಗಮ 2026
(ವೈಎಸ್ಎಸ್ ನೋಯ್ಡಾ ಆಶ್ರಮ)
ಬುಧವಾರ, ಅಕ್ಟೋಬರ್ 7, 2026 – ರವಿವಾರ, ಅಕ್ಟೋಬರ್ 11, 2026
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿಗಳು ಈಗ ಪ್ರಾರಂಭವಾಗಿವೆ!
ನೋಂದಣಿ ಮತ್ತು ವಿಚಾರಣೆಗಾಗಿ ಸಂಪರ್ಕ ವಿವರಗಳು
ಯೋಗದಾ ಸತ್ಸಂಗ ಶಾಖಾ ಮಠ — ರಾಂಚಿ
ಪರಮಹಂಸ ಯೋಗಾನಂದ ಪಥ
ರಾಂಚಿ – 834001
ದೂರವಾಣಿ: (0651) 6655 555 (ಸೋಮವಾರದಿಂದ ಶನಿವಾರದವರೆಗೆ, ಬೆಳಿಗ್ಗೆ 9:30 ರಿಂದ ಸಂಜೆ 4:30 ರವರೆಗೆ)
ಇಮೇಲ್: [email protected]
ಕಾರ್ಯಕ್ರಮ ನಡೆಯುವ ಸ್ಥಳ
ಯೋಗದಾ ಸತ್ಸಂಗ ಶಾಖಾ ಆಶ್ರಮ — ನೊಯ್ಡಾ
ಪರಮಹಂಸ ಯೋಗಾನಂದ ಮಾರ್ಗ
ಬಿ-4, ಸೆಕ್ಟರ್ 62
ನೊಯ್ಡಾ – 201307
ಗೌತಮ ಬುದ್ಧ ನಗರ
ದೂರವಾಣಿ: +91 9899811808, +91 9899811909
ಇಮೇಲ್: [email protected]
ಗೂಗಲ್ ನಕ್ಷೆಯ ಕೊಂಡಿ: ಇಲ್ಲಿ ಒತ್ತಿ
ಕಾರ್ಯಕ್ರಮದ ಬಗ್ಗೆ
ಇತರರ ಆಧ್ಯಾತ್ಮಿಕ ಕಂಪನಗಳ ಸಾಮೀಪ್ಯವು ನಿಮ್ಮ ಸ್ವಂತ ಕಂಪನಗಳನ್ನು ಉನ್ನತೀಕರಿಸುವ ಶಕ್ತಿಯನ್ನು ಹೊಂದಿದೆ. ಆದ್ದರಿಂದ ಇತರ ಭಕ್ತರೊಂದಿಗೆ ಧ್ಯಾನ ಮಾಡುವುದು ನಿಮ್ಮ ಆಧ್ಯಾತ್ಮಿಕ ವಿಕಾಸವನ್ನು ತ್ವರಿತಗೊಳಿಸಲು ಸಹಾಯ ಮಾಡುತ್ತದೆ. ಅವರು ಆತ್ಮಸಾಕ್ಷಾತ್ಕಾರದತ್ತ ಸಾಗುವ ನಿಮ್ಮ ಪಯಣದಲ್ಲಿ ನಿಮಗೆ ಸ್ಫೂರ್ತಿ ನೀಡುತ್ತಾರೆ; ಹಾಗೆಯೇ, ನಿಮ್ಮ ಉದಾಹರಣೆಯ ಮೂಲಕ ನೀವು ಕೂಡ ಅವರಿಗೆ ಸಹಾಯ ಮಾಡಬಹುದು.
— ಶ್ರೀ ಶ್ರೀ ಪರಮಹಂಸ ಯೋಗಾನಂದ
ಯುವ ಸಾಧಕರ ಆಧ್ಯಾತ್ಮಿಕ ಪಯಣವನ್ನು ಬೆಂಬಲಿಸುವ ತನ್ನ ನಿರಂತರ ಪ್ರಯತ್ನಗಳ ಭಾಗವಾಗಿ, ವೈಎಸ್ಎಸ್ ಈ ವರ್ಷದ ಯುವ ಸಾಧಕ ಸಂಗಮವನ್ನು 2026ರ ಅಕ್ಟೋಬರ್ 7ರಿಂದ 11ರವರೆಗೆ (ಬುಧವಾರದಿಂದ ಭಾನುವಾರದವರೆಗೆ) ನೋಯ್ಡಾದ ಯೋಗದಾ ಸತ್ಸಂಗ ಶಾಖಾ ಆಶ್ರಮದಲ್ಲಿ ಆಯೋಜಿಸಲು ಸಂತೋಷಪಡುತ್ತದೆ. ಭಾಗವಹಿಸುವವರು ಅಕ್ಟೋಬರ್ 6ರಂದು ಆಗಮಿಸಿ, ನೋಂದಣಿ, ಪರಿಚಯ ಕಾರ್ಯಕ್ರಮದಲ್ಲಿ ಭಾಗವಹಿಸುವುದು ಮತ್ತು ಪರಸ್ಪರ ಪರಿಚಯ ಮಾಡಿಕೊಳ್ಳುವ ಅವಕಾಶವನ್ನು ಪಡೆಯಲಿದ್ದಾರೆ.
ಕಳೆದ ವರ್ಷ ರಾಂಚಿಯಲ್ಲಿ ನಡೆದ ಪ್ರಥಮ ಯುವ ಸಾಧಕ ಸಂಗಮಕ್ಕೆ ದೊರೆತ ಉತ್ಸಾಹದಾಯಕ ಪ್ರತಿಕ್ರಿಯೆಯ ನಂತರ, ಭಾರತದಾದ್ಯಂತದ 200ಕ್ಕೂ ಹೆಚ್ಚು ಯುವ ಭಕ್ತರನ್ನು ಒಂದೆಡೆ ಸೇರಿಸಿದ ಈ ಕಾರ್ಯಕ್ರಮವು, ಆಧ್ಯಾತ್ಮಿಕ ಸಹಭಾಗಿತ್ವದ ಅವಕಾಶಗಳನ್ನು ವಿಸ್ತರಿಸುವ ನಿಟ್ಟಿನಲ್ಲಿ ವೈಎಸ್ಎಸ್ಗೆ ಮತ್ತಷ್ಟು ಪ್ರೋತ್ಸಾಹ ನೀಡಿದೆ. ಈ ಪ್ರಯತ್ನಗಳ ಭಾಗವಾಗಿ, 2025ರ ಕೊನೆಯಲ್ಲಿ ‘ಯುವ ಸಾಧಕ ಫೆಲೋಶಿಪ್’ ಎಂಬ ಆನ್ಲೈನ್ ಕಾರ್ಯಕ್ರಮವನ್ನು ಪ್ರಾರಂಭಿಸಲಾಗಿದ್ದು, ಅದರ ಮಾಸಿಕ ಆನ್ಲೈನ್ ಸಭೆಗಳನ್ನೂ ನಡೆಸಲಾಗುತ್ತಿದೆ. ಅಲ್ಲದೆ, ಈ ವರ್ಷದ ಆರಂಭದಲ್ಲಿ ಬೆಂಗಳೂರಿನಲ್ಲಿ ಮತ್ತು ಚಂಡೀಗಢದಲ್ಲಿ ಪ್ರಾದೇಶಿಕ ‘ಯುವ ಸಾಧಕ ವಾರಾಂತ್ಯ ಶಿಬಿರಗಳನ್ನು’ ಆಯೋಜಿಸಲಾಯಿತು. ಈ ಉಪಕ್ರಮಗಳನ್ನು ಮುಂದುವರಿಸಿಕೊಂಡು, ಈ ವರ್ಷದ ಸಂಗಮವು ನೋಯ್ಡಾ ಆಶ್ರಮದಲ್ಲಿ ನಡೆಯಲಿದೆ.
“ಭಾವನೆಗಳ ಆಧ್ಯಾತ್ಮೀಕರಣ – ಸಂಬಂಧಗಳ ಸಾಮರಸ್ಯ” ಎಂಬ ವಿಷಯವನ್ನು ಕೇಂದ್ರವಾಗಿಟ್ಟುಕೊಂಡು, ಈ ಸಂಗಮವನ್ನು ವೈಎಸ್ಎಸ್ನ ಯುವ ವಯಸ್ಕ ಭಕ್ತರಿಗಾಗಿ ವಿಶೇಷವಾಗಿ ವಿನ್ಯಾಸಗೊಳಿಸಲಾಗಿದೆ. ಪರಮಹಂಸಜಿಯವರ ಬದುಕುವುದು ಹೇಗೆ ಬೋಧನೆಗಳ ಮೂಲಕ ಮತ್ತು ಸಹ ಸಾಧಕರೊಂದಿಗೆ ಕೂಡಿ ಬಾಳುವ ಮೂಲಕ, ಪಾಲ್ಗೊಳ್ಳುವವರು ಭಾವನಾತ್ಮಕ ಸಮತೋಲನವನ್ನು ಬೆಳೆಸಿಕೊಳ್ಳಲು ಮತ್ತು ತಮ್ಮ ಸಂಬಂಧಗಳಲ್ಲಿ ಶಾಂತಿ ಹಾಗೂ ಸಾಮರಸ್ಯವನ್ನು ಪೋಷಿಸಲು ಪ್ರಾಯೋಗಿಕ ಮಾರ್ಗಗಳನ್ನು ಅನ್ವೇಷಿಸಲಿದ್ದಾರೆ.
ಈ ಸ್ಫೂರ್ತಿದಾಯಕ ಕಾರ್ಯಕ್ರಮದಲ್ಲಿ ಭಾಗವಹಿಸಲು ನಾವು ಯುವ ಭಕ್ತರನ್ನು ಆತ್ಮೀಯವಾಗಿ ಆಹ್ವಾನಿಸುತ್ತೇವೆ. ಈ ಸಂಗಮವು ಆಧ್ಯಾತ್ಮಿಕ ಜೀವನವನ್ನು ಮತ್ತಷ್ಟು ಆಳವಾಗಿಸಿಕೊಳ್ಳಲು, ಸಹ ಸಾಧಕರೊಂದಿಗೆ ಶಾಶ್ವತವಾದ ಸ್ನೇಹವನ್ನು ಬೆಳೆಸಿಕೊಳ್ಳಲು ಮತ್ತು ದೇವರು ಹಾಗೂ ಗುರುಗಳ ಸಾನ್ನಿಧ್ಯದಲ್ಲಿ ಜೀವಿಸುವ ಆನಂದವನ್ನು ಅನುಭವಿಸಲು ಅವಕಾಶವನ್ನು ಕಲ್ಪಿಸಲಿ ಎಂದು ನಾವು ಪ್ರಾರ್ಥಿಸುತ್ತೇವೆ.
2025ರ ಯುವ ಸಾಧಕ ಸಂಗಮದ ಒಂದು ನೋಟ
ಸಂಗಮದ ಮುಖ್ಯಾಂಶಗಳು
- ಸಾಮೂಹಿಕ ಧ್ಯಾನ
- ಪವಿತ್ರ ವೈಎಸ್ಎಸ್ ಧ್ಯಾನ ತಂತ್ರಗಳ ಪುನರಾವಲೋಕನ ಮತ್ತು ಮಾರ್ಗದರ್ಶಿತ ಅಭ್ಯಾಸ
- ಪಾಠಗಳ ಸಾಮೂಹಿಕ ಅಧ್ಯಯನ ಮತ್ತು ಆತ್ಮಾವಲೋಕನ
- ಗುರೂಜಿಯವರ ಬೋಧನೆಗಳ ಕುರಿತು ಸ್ಫೂರ್ತಿದಾಯಕ ಸತ್ಸಂಗಗಳು ಮತ್ತು ದೈನಂದಿನ ಜೀವನದಲ್ಲಿ ಅವುಗಳ ಅನ್ವಯ
- ಭಾವನೆಗಳನ್ನು ಆಧ್ಯಾತ್ಮಿಕಗೊಳಿಸಲು ಮತ್ತು ಸಂಬಂಧಗಳಲ್ಲಿ ಸಾಮರಸ್ಯವನ್ನು ಸಾಧಿಸಲು ಪ್ರಾಯೋಗಿಕ ಮಾರ್ಗಗಳನ್ನು ಅನ್ವೇಷಿಸುವ ಕುರಿತು ಕಾರ್ಯಾಗಾರಗಳು ಮತ್ತು ಚರ್ಚಾ ಗುಂಪುಗಳು
- ಕೀರ್ತನೆಗಳು — ಸಾಮೂಹಿಕ ಭಕ್ತಿಗೀತೆಗಳ ಗಾಯನ
- ಆಧ್ಯಾತ್ಮಿಕ ಸಮಾಲೋಚನೆ – ವಿನಂತಿಯ ಮೇರೆಗೆ ಅನುಭವಿ ಸನ್ಯಾಸಿಗಳಿಂದ ವೈಯಕ್ತಿಕ ಮಾರ್ಗದರ್ಶನ
- ಗುರು-ಸೇವೆ — ಸ್ವಾಗತ ಮತ್ತು ಮಾರ್ಗದರ್ಶನ, ಊಟದ ವ್ಯವಸ್ಥೆ, ಅಲಂಕಾರ, ನೋಂದಣಿ ಮೇಜು, ಪುಸ್ತಕ ಕೊಠಡಿ ಹಾಗೂ ಆಡಿಯೋ-ವೀಡಿಯೊ ಮುಂತಾದ ಸಂಗಮದ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲು ಅವಕಾಶಗಳು.
- ಹಠ ಯೋಗ ಅವಧಿಗಳು, ಕ್ರೀಡೆಗಳು ಇತ್ಯಾದಿ ಚಟುವಟಿಕೆಗಳನ್ನು ಒಳಗೊಂಡ ದೈನಂದಿನ ಮನರಂಜನಾ ಅವಧಿ
- ಇತರ ಯುವ ಸಾಧಕರೊಂದಿಗೆ ಸಹಭಾಗಿತ್ವ
- ಪ್ರಕೃತಿಯ ರಮಣೀಯ ಸ್ಥಳಕ್ಕೆ ವಿಹಾರ
ಕಾರ್ಯಕ್ರಮದ ವೇಳಾಪಟ್ಟಿ
ತರಗತಿಗಳು ಮತ್ತು ಉಪನ್ಯಾಸಗಳು ಇಂಗ್ಲಿಷ್ನಲ್ಲಿರುತ್ತವೆ.
ಕ್ರಿಯಾ ಯೋಗ ದೀಕ್ಷಾ ಸಮಾರಂಭವಿಲ್ಲದಿದ್ದರೂ, ಕ್ರಿಯಾ ಯೋಗದ ತಂತ್ರದ ಕುರಿತು ಪುನರಾವಲೋಕನ ತರಗತಿಯನ್ನು ನಡೆಸಲಾಗುತ್ತದೆ.
ಕಾರ್ಯಕ್ರಮದ ದಿನಾಂಕ ಸಮೀಪಿಸಿದಂತೆ ವಿವರವಾದ ವೇಳಾಪಟ್ಟಿ ಲಭ್ಯವಾಗಲಿದೆ. ಕಾರ್ಯಕ್ರಮ ಪ್ರಾರಂಭವಾಗಲು ಕೆಲವೇ ವಾರಗಳ ಮೊದಲು ದಯವಿಟ್ಟು ಈ ವಿಭಾಗವನ್ನು ವೀಕ್ಷಿಸಿ.
ಹೆಚ್ಚಿನ ಮಾಹಿತಿ
23 ರಿಂದ 35 ವಯಸ್ಸಿನ ನಡುವಿನ ವೈಎಸ್ಎಸ್/ಎಸ್ಆರ್ಎಫ್ ಭಕ್ತರು ಈ ಸಂಗಮದಲ್ಲಿ ಭಾಗವಹಿಸಲು ಅರ್ಹರು.
ನೀವು ಈ ವಯಸ್ಸಿನ ಮಿತಿಯಿಂದ ಸ್ವಲ್ಪ ಹೊರಗಿದ್ದರೂ ಭಾಗವಹಿಸಲು ಪ್ರಾಮಾಣಿಕವಾಗಿ ಬಯಸಿದರೆ, ಮಾರ್ಗದರ್ಶನಕ್ಕಾಗಿ [email protected] ಗೆ ಇಮೇಲ್ ಕಳುಹಿಸುವ ಮೂಲಕ ನಿಮ್ಮ ವಿನಂತಿಯನ್ನು ಸಲ್ಲಿಸಿ.
ಪಾವತಿ:
- ನೋಂದಣಿ ಶುಲ್ಕ ಪ್ರತಿ ವ್ಯಕ್ತಿಗೆ ₹2,500/-. ಈ ಶುಲ್ಕವು ಊಟದ ವೆಚ್ಚವನ್ನು ಒಳಗೊಂಡಿರುತ್ತದೆ.
- ನೋಂದಣಿ ಶುಲ್ಕವನ್ನು ಭರಿಸಲು ಅಶಕ್ತರಾದವರಿಗೆ ಆರ್ಥಿಕ ಸಹಾಯವೂ ಲಭ್ಯವಿದೆ. ಶುಲ್ಕವನ್ನು ಪಾವತಿಸಲು ನಿಮಗೆ ಕಷ್ಟವಾಗುತ್ತಿದ್ದರೆ, ದಯವಿಟ್ಟು (0651 6655 555) ಗೆ ಕರೆ ಮಾಡುವ ಮೂಲಕ ಅಥವಾ [email protected] ಗೆ ಇಮೇಲ್ ಕಳುಹಿಸುವ ಮೂಲಕ ವೈಎಸ್ಎಸ್ ಸಹಾಯವಾಣಿಯನ್ನು ಸಂಪರ್ಕಿಸಿ.
ಹೆಚ್ಚುವರಿ ವಿವರಗಳು
ಮೊದಲು ಬಂದವರಿಗೆ ಮೊದಲ ಆದ್ಯತೆ:
- ಲಭ್ಯವಿರುವ ಸೀಮಿತ ಸೌಲಭ್ಯಗಳಿಂದಾಗಿ, ಮೊದಲು ಬಂದವರಿಗೆ ಮೊದಲ ಆದ್ಯತೆ ಎಂಬ ಆಧಾರದ ಮೇಲೆ ನೋಂದಣಿಗಳನ್ನು ಖಚಿತಪಡಿಸಲಾಗುತ್ತದೆ.
- ಗರಿಷ್ಠ ಸಂಖ್ಯೆಯ ಭಾಗಿಗಳನ್ನು ತಲುಪಿದ ನಂತರ ನೋಂದಣಿಗಳು ಮುಂಚಿತವಾಗಿ ಮುಕ್ತಾಯಗೊಳ್ಳಬಹುದು.
ಅರ್ಹತೆ:
- ವೈಎಸ್ಎಸ್/ಎಸ್ಆರ್ಎಫ್ ಭಕ್ತರು ಮಾತ್ರ ಸಂಗಮದಲ್ಲಿ ಭಾಗವಹಿಸಬಹುದು.
- ಎಸ್ಆರ್ಎಫ್ ಭಕ್ತರು ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ಸ್ವಾಗತಾರ್ಹರಾಗಿದ್ದರೂ, ಅವರು ಹತ್ತಿರದ ಹೋಟೆಲ್ಗಳಲ್ಲಿ ತಮ್ಮ ವಸತಿ ವ್ಯವಸ್ಥೆಯನ್ನು ಮಾಡಿಕೊಳ್ಳಬೇಕಾಗುತ್ತದೆ. ಅಂತಹ ಹೋಟೆಲ್ಗಳ ಪಟ್ಟಿಯು ಇಲ್ಲಿ ಲಭ್ಯವಿದೆ.
ಸಂಪೂರ್ಣ ಭಾಗವಹಿಸುವಿಕೆ:
ಸಂಗಮದ ಸಂಪೂರ್ಣ ಅವಧಿಯಲ್ಲಿ ಯೋಜಿಸಲಾದ ಎಲ್ಲಾ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳುವವರು ಹಾಜರಿರುವ ನಿರೀಕ್ಷೆಯಿದೆ. ವೇಳಾಪಟ್ಟಿಯು ಕಾರ್ಯಭರಿತವಾಗಿರುವುದರಿಂದ, ದುರ್ಬಲ ಆರೋಗ್ಯ ಹೊಂದಿರುವ, ವಿಶೇಷ ಅಗತ್ಯಗಳಿರುವ ಅಥವಾ ಹೆಚ್ಚಿನ ಕಚೇರಿ ಕೆಲಸದ ಬದ್ಧತೆಗಳನ್ನು ಹೊಂದಿರುವ ಭಕ್ತರು ಅರ್ಜಿ ಸಲ್ಲಿಸದಂತೆ ಸಲಹೆ ನೀಡಲಾಗುತ್ತದೆ.
ನೋಂದಣಿ ಮಾಹಿತಿ
ಈ ಕಾರ್ಯಕ್ರಮದಲ್ಲಿ ಭಾಗವಹಿಸಲು ನೋಂದಣಿಗಳು ಈಗ ಪ್ರಾರಂಭವಾಗಿವೆ!
ನೋಂದಣಿ ಪ್ರಕ್ರಿಯೆಗೆ ಸಂಬಂಧಿಸಿದ ವಿವರವಾದ ಮಾಹಿತಿಯು ಈ ಕೆಳಗಿನಂತಿದೆ:
ಭಕ್ತರ ಪೋರ್ಟಲ್ ಮೂಲಕ ಆನ್ಲೈನ್ ನೋಂದಣಿ:
ತ್ವರಿತ ಮತ್ತು ಸುಲಭ ನೋಂದಣಿಗಾಗಿ, ದಯವಿಟ್ಟು ಕೆಳಗಿನ ಗುಂಡಿಯನ್ನು ಒತ್ತುವ ಮೂಲಕ ಆನ್ಲೈನ್ನಲ್ಲಿ ನೋಂದಾಯಿಸಿ.
ಸಹಾಯವಾಣಿಯನ್ನು ಸಂಪರ್ಕಿಸುವ ಮೂಲಕ ನೋಂದಣಿ:
ದಯವಿಟ್ಟು (0651 6655 555) ಗೆ ಕರೆ ಮಾಡಿ ಅಥವಾ ರಾಂಚಿ ಆಶ್ರಮದ ಸಹಾಯವಾಣಿಗೆ ಇಮೇಲ್ ಮಾಡಿ ಮತ್ತು ಈ ಕೆಳಗಿನ ವಿವರಗಳನ್ನು ಒದಗಿಸಿ:
- ನಿಮ್ಮ ಪೂರ್ಣ ಹೆಸರು
- ವಯಸ್ಸು
- ವಿಳಾಸ
- ಇಮೇಲ್ ಮತ್ತು ದೂರವಾಣಿ ಸಂಖ್ಯೆ
- ವೈಎಸ್ಎಸ್ ಪಾಠಗಳ ನೋಂದಣಿ ಸಂಖ್ಯೆ (ಅಥವಾ ಎಸ್ಆರ್ಎಫ್ ಸದಸ್ಯತ್ವ ಸಂಖ್ಯೆ)
- ನೀವು ಬರಲು ಮತ್ತು ತೆರಳಲು ಉದ್ದೇಶಿಸಿರುವ ದಿನಾಂಕಗಳು.
ನಿಮ್ಮ ಮೊಬೈಲ್ ಅಥವಾ ಇಮೇಲ್ ವಿಳಾಸಕ್ಕೆ ಕಳುಹಿಸಲಾಗುವ ಪಾವತಿ ಕೊ೦ಡಿ ಮೂಲಕ ನೀವು ಮೊತ್ತವನ್ನು ಪಾವತಿಸಬಹುದು.
ಎಸ್ಆರ್ಎಫ್ ಭಕ್ತರಿಗಾಗಿ ನೋಂದಣಿ:
- ಆಸಕ್ತ ಎಸ್ಆರ್ಎಫ್ ಭಕ್ತರು ಇಮೇಲ್ ಮೂಲಕ ವೈಎಸ್ಎಸ್ ಸಹಾಯವಾಣಿಯನ್ನು ಸಂಪರ್ಕಿಸಲು ಮತ್ತು ಮೇಲೆ ತಿಳಿಸಿದಂತೆ ತಮ್ಮ ಎಲ್ಲಾ ವಿವರಗಳನ್ನು ಒದಗಿಸಲು ನಾವು ವಿನಂತಿಸುತ್ತೇವೆ.
- ಎಸ್ಆರ್ಎಫ್ ಭಕ್ತರು ಈ ಸಮಾರಂಭದಲ್ಲಿ ಭಾಗವಹಿಸಲು ಮತ್ತು ಸ್ಥಳದಲ್ಲೇ ಊಟ ಮಾಡಲು ಹಾರ್ದಿಕ ಸ್ವಾಗತವಿದ್ದರೂ, ಸಮೀಪದ ಹೋಟೆಲ್ಗಳಲ್ಲಿ ತಮ್ಮ ಸ್ವಂತ ವಸತಿ ವ್ಯವಸ್ಥೆಯನ್ನು ಮಾಡಿಕೊಳ್ಳಲು ಅವರನ್ನು ವಿನಂತಿಸಲಾಗಿದೆ. ಅಂತಹ ಹೋಟೆಲ್ಗಳ ಪಟ್ಟಿಯು ಇಲ್ಲಿ ಲಭ್ಯವಿದೆ.
ದಯವಿಟ್ಟು ಗಮನಿಸಿ:
- ನಿಮ್ಮ ನೋಂದಣಿ ದೃಢೀಕರಿಸಿದ ನಂತರ ನೀವು ಭಾಗವಹಿಸಲು ಸಾಧ್ಯವಾಗದಿದ್ದರೆ, ನೋಂದಣಿ ಶುಲ್ಕವನ್ನು ಹಿಂದಿರುಗಿಸಲಾಗುವುದಿಲ್ಲ ಅಥವಾ ಬೇರೆ ವ್ಯಕ್ತಿಗೆ ವರ್ಗಾಯಿಸಲಾಗುವುದಿಲ್ಲ.
- ನೋಂದಣಿ ಯಶಸ್ವಿಯಾದ ನಂತರ, ನಿಮಗೆ ಇಮೇಲ್, ವಾಟ್ಸಾಪ್ ಅಥವಾ ಎಸ್ಎಂಎಸ್ ಮೂಲಕ ದೃಢೀಕರಣ ದೊರೆಯುತ್ತದೆ. ನಿಮಗೆ ಅಂತಹ ಯಾವುದೇ ಮಾಹಿತಿ ಬರದಿದ್ದರೆ, ದಯವಿಟ್ಟು ವೈಎಸ್ಎಸ್ ರಾಂಚಿ ಸಹಾಯವಾಣಿಯನ್ನು ಫೋನ್ (0651 6655 555) ಅಥವಾ ಇಮೇಲ್ ([email protected]) ಮೂಲಕ ಸಂಪರ್ಕಿಸಿ.
- ಈ ಕಾರ್ಯಕ್ರಮವು ಬುಧವಾರ ಬೆಳಿಗ್ಗೆ ಪ್ರಾರಂಭವಾಗಿ ಭಾನುವಾರ ಮಧ್ಯಾಹ್ನದ ಸುಮಾರಿಗೆ ಮುಕ್ತಾಯಗೊಳ್ಳುತ್ತದೆ.
- ವೈಎಸ್ಎಸ್ ಸನ್ಯಾಸಿಗಳು ನಡೆಸಿಕೊಡುವ ಸಂಜೆಯ ಧ್ಯಾನ, ಪರಿಚಯಾತ್ಮಕ ಚಟುವಟಿಕೆಗಳು ಮತ್ತು ದೃಷ್ಟಿಕೋನ ಅಧಿವೇಶನದಲ್ಲಿ ಭಾಗವಹಿಸುವವರು ಅಕ್ಟೋಬರ್ 6, ಮಂಗಳವಾರ ಮಧ್ಯಾಹ್ನದೊಳಗೆ ನೋಯ್ಡಾ ಆಶ್ರಮಕ್ಕೆ ಆಗಮಿಸುವಂತೆ ವಿನಂತಿಸಲಾಗಿದೆ. ಆಶ್ರಮದಲ್ಲಿ ಹೆಚ್ಚಿನ ಸಮಯವನ್ನು ಕಳೆಯಲು ಬಯಸುವವರು ಎರಡು ದಿನ ಮುಂಚಿತವಾಗಿ ಆಗಮಿಸಲು ಮತ್ತು ಕಾರ್ಯಕ್ರಮ ಮುಕ್ತಾಯಗೊಂಡ ನಂತರ ಒಂದು ದಿನ ಹೆಚ್ಚುವರಿಯಾಗಿ ಉಳಿಯಲು ಸ್ವಾಗತ.
- ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿ ಹಂಚಿಕೆಯ ವಸತಿ ವ್ಯವಸ್ಥೆ ಮಾಡಲಾಗುತ್ತದೆ. ಕುಟುಂಬದ ಸದಸ್ಯರು ಇದಕ್ಕೆ ಅನುಗುಣವಾಗಿ ಯೋಜಿಸಿಕೊಂಡು, ಅಗತ್ಯ ಸಾಮಾನುಗಳನ್ನು ಸಿದ್ಧಪಡಿಸಿಕೊಳ್ಳುವಂತೆ ವಿನಂತಿಸಲಾಗಿದೆ.
- ಎಲ್ಲಾ ಭಾಗವಹಿಸುವವರು ಆಶ್ರಮದ ಆವರಣದೊಳಗೆ ಉಳಿಯಲು ಪ್ರೋತ್ಸಾಹಿಸಲಾಗುತ್ತದೆ. ವಿಶೇಷ ವಸತಿ ಅಥವಾ ಆಹಾರದ ಅವಶ್ಯಕತೆಗಳಿರುವವರು ದಯವಿಟ್ಟು ಆಶ್ರಮದ ಹೊರಗೆ ತಮ್ಮದೇ ಆದ ವ್ಯವಸ್ಥೆಗಳನ್ನು ಮಾಡಿಕೊಳ್ಳಬಹುದು. ಸಮೀಪದ ಹೋಟೆಲ್ಗಳ ಪಟ್ಟಿಯು ಇಲ್ಲಿ ಲಭ್ಯವಿದೆ.
ಈ ಸಂಗಮವು ಹೆಚ್ಚಾಗಿ “ಯುವ ಸಾಧಕರಿಗಾಗಿ, ಯುವ ಸಾಧಕರಿಂದ” ಆಯೋಜಿಸಲ್ಪಟ್ಟಿದೆ. ಸಂಗಮದ ಸಮಯದಲ್ಲಿ ಆಶ್ರಮದಲ್ಲಿನ ಅನೇಕ ಸೇವಾ ಅವಕಾಶಗಳು ಯುವ ಸಾಧಕರಿಗೆ ಮುಕ್ತವಾಗಿವೆ. ನೋಂದಣಿ, ವಸತಿ, ದೃಶ್ಯ-ಶ್ರಾವ್ಯ, ಭೋಜನ, ನೈರ್ಮಲ್ಯ, ಮಾರ್ಗದರ್ಶನ ಮತ್ತು ಇತರ ವಿಭಾಗಗಳಂತಹ ವಿವಿಧ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಲು ಅವರಿಗೆ ಅವಕಾಶವಿರುತ್ತದೆ. ಈ ಕೆಲವು ಕ್ಷೇತ್ರಗಳಲ್ಲಿ, ಸ್ವಯಂಸೇವಕರು ಕಾರ್ಯಕ್ರಮ ಪ್ರಾರಂಭವಾಗಲು ಒಂದು ಅಥವಾ ಎರಡು ದಿನ ಮುಂಚಿತವಾಗಿ ಆಗಮಿಸಬೇಕಾಗಬಹುದು.
ನಿಮ್ಮ ಸೇವೆಯನ್ನು ಅರ್ಪಿಸಲು ನಿಮಗೆ ಸ್ಫೂರ್ತಿ ದೊರೆತರೆ, ದಯವಿಟ್ಟು ನಿಮ್ಮ ನೋಂದಣಿ ಅರ್ಜಿಯನ್ನು ಭರ್ತಿ ಮಾಡುವಾಗ ನಿಮ್ಮ ಆಸಕ್ತಿಯನ್ನು ತಿಳಿಸಿ.
ನಿಮ್ಮ ಆರ್ಥಿಕ ಬೆಂಬಲವು ಪ್ರಶಂಸನೀಯವಾಗಿದೆ
ಈ ಸಂಗಮವನ್ನು ಆಯೋಜಿಸುವಲ್ಲಿ ತಗಲುವ ವಿವಿಧ ವೆಚ್ಚಗಳನ್ನು ಭರಿಸಲು ನೀವು ನೀಡುವ ಕೊಡುಗೆಗಳು ಪ್ರಶಂಸನೀಯವಾಗಿವೆ. ಸೀಮಿತ ಸಂಪನ್ಮೂಲಗಳನ್ನು ಹೊಂದಿರುವ ಸಾಧಕರೂ ಸಹ ಭಾಗವಹಿಸಲು ಅನುವಾಗುವಂತೆ ನೋಂದಣಿ ಶುಲ್ಕವನ್ನು ರಿಯಾಯಿತಿ ದರದಲ್ಲಿ ನಿಗದಿಪಡಿಸಲಾಗಿದೆ. ಗುರುದೇವರ ಅತಿಥಿ ಸತ್ಕಾರವನ್ನು ಎಲ್ಲಾ ಪ್ರಾಮಾಣಿಕ ಅನ್ವೇಷಕರಿಗೆ ವಿಸ್ತರಿಸಲು ಈ ರಿಯಾಯಿತಿಯನ್ನು ಒದಗಿಸಲು ನಮಗೆ ಅನುವು ಮಾಡಿಕೊಡುವ ದೊಡ್ಡ ಕೊಡುಗೆಗಳನ್ನು ನೀಡಲು ಸಾಧ್ಯವಿರುವವರಿಗೆ ನಾವು ಕೃತಜ್ಞರಾಗಿದ್ದೇವೆ.
ಲಭ್ಯವಿರುವ ಯುವ ಕಾರ್ಯಕ್ರಮಗಳ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳಲು ಬಯಸಿದರೆ, ದಯವಿಟ್ಟು [email protected] ಅನ್ನು ಸಂಪರ್ಕಿಸಿ.

















