ಇತರರೊಡನೆಯ ನಮ್ಮ ಸಂಬಂಧಗಳಲ್ಲಿ ಸಾಮರಸ್ಯವನ್ನು ತರುವುದು

ಶ್ರೀ ಶ್ರೀ ಪರಮಹಂಸ ಯೋಗಾನಂದರ ಬರಹಗಳಿಂದ ಆಯ್ದ ಭಾಗಗಳು

ಸಂಬಂಧಗಳಲ್ಲಿ ಸಾಮರಸ್ಯವನ್ನು ಚಿತ್ರಿಸುವ ಎರಡು ಹಂಸಗಳು.

ಎಲ್ಲ ಸಂತೋಷಗಳಿಗಿಂತ ಶ್ರೇಷ್ಠವಾದುದೆಂದರೆ, ದಿವ್ಯಾನಂದಕ್ಕೆ ಹತ್ತಿರವಾದುದೆಂದರೆ, ವರ್ಷದ ಪ್ರತಿದಿನವೂ ನಾವು ಯಾರೊಡನೆ ಇರಬೇಕಾಗಿದೆಯೋ ಆ ಹತ್ತಿರದ ಬಂಧುಗಳೊಡನೆ ಶಾಂತಿಯಿಂದಿರುವುದು. ಯಾವುದೇ ತರಬೇತಿಯಿಲ್ಲದೆ ಮಾನವನ ಭಾವನೆಗಳೆಂಬ ಅತ್ಯಂತ ಸಂಕೀರ್ಣ ಯಂತ್ರೋಪಕರಣವನ್ನು ಜನರು ನಿರ್ವಹಿಸಲು ಪ್ರಯತ್ನಿಸಿದಾಗ, ಪರಿಣಾಮಗಳು ಹೆಚ್ಚಾಗಿ ಅನರ್ಥಕಾರಿಯಾಗಿರುತ್ತವೆ. ನಮ್ಮ ಹೆಚ್ಚಿನ ಸುಖಸಂತೋಷಗಳಿರುವುದು ಮಾನವನ ವರ್ತನೆಯ ನಿಯಮವನ್ನು ಅರ್ಥ ಮಾಡಿಕೊಳ್ಳುವ ಕಲೆಯಲ್ಲಿ ಎಂದು ಎಲ್ಲೋ ಕೆಲವರಿಗೆ ಮಾತ್ರ ತಿಳಿದಿರುತ್ತದೆ. ಆದ್ದರಿಂದಲೇ ಅಷ್ಟೊಂದು ಜನ ತಮ್ಮಸ್ನೇಹಿತರೊಂದಿಗೆ ಆಗಾಗ್ಗೆ “ತೊಂದರೆಗೆ ಸಿಲುಕುತ್ತಾರೆ,” ಇದಕ್ಕಿಂತಲೂ ಕೆಟ್ಟುದೆಂದರೆ ತಮ್ಮ ಮನೆಯಲ್ಲಿಯೇ ತಮಗೆ ಅತಿ ಪ್ರಿಯರಾದವರೊಡನೆ ನಿರಂತರವಾಗಿ ಜಗಳ ಕಾಯುತ್ತಿರುತ್ತಾರೆ.

ಮಾನವನ ಸರಿಯಾದ ವರ್ತನೆಯ ಮೂಲ ನಿಯಮವೇ ಸ್ವಸುಧಾರಣೆ….ನಮ್ಮ ಸ್ನೇಹಿತರೊಂದಿಗೆ ಅಥವಾ ನಮ್ಮ ಪ್ರೀತಿಪಾತ್ರರೊಂದಿಗೆ ಯಾವುದೋ ಒಂದು ಸಮಸ್ಯೆ ಎದುರಾದಾಗ, ಅಹಿತಕರ ಪರಿಸ್ಥಿತಿಯಲ್ಲಿ ಸಿಲುಕಿಕೊಂಡುದಕ್ಕಾಗಿ ಮನದಲ್ಲೇ ನಮ್ಮನ್ನು ನಾವು ದೂಷಿಸಿಕೊಳ್ಳಬೇಕು, ನಂತರ ಅಲ್ಲಿಂದ ಆದಷ್ಟು ಬೇಗ ಮರ್ಯಾದೆಯಿಂದ ಜಾಗ ಖಾಲಿಮಾಡ ಬೇಕು. ಬೇರೆಯವರನ್ನು ಅವರದೇ ತಪ್ಪಿದ್ದರೂ, ಗಟ್ಟಿಯಾಗಿ, ನಿರ್ದಯೆಯಿಂದ ಅಸಭ್ಯವಾಗಿ ಬಯ್ದು ತೊಂದರೆಯನ್ನು ಹೆಚ್ಚಿಸಿಕೊಳ್ಳುವುದರಿಂದ ಏನೂ ಪ್ರಯೋಜನವಿಲ್ಲ. ಶೀಘ್ರಕೋಪಿಗಳಾದ ನಮ್ಮ ಪ್ರೀತಿಪಾತ್ರರನ್ನು ಅವರ ತಪ್ಪುಗಳನ್ನು ತಿದ್ದಿಕೊಳ್ಳಲು ಒರಟಾಗಿ ಅಥವಾ ಸ್ವಪ್ರತಿಷ್ಠೆಯ ಮಾತುಗಳಿಂದ ಕಲಿಸುವುದಕ್ಕಿಂತ ನಮ್ಮ ಒಳ್ಳೆಯ ಉದಾಹರಣೆಯ ಮೂಲಕ ಕಲಿಸುವುದು ನೂರು ಪಾಲು ಒಳ್ಳೆಯದು.

ಹೆಚ್ಚಾಗಿ ಜನರು ತಮ್ಮದೇ ದೃಷ್ಟಿಕೋನದಿಂದ ಮಾತನಾಡುತ್ತಾರೆ ಹಾಗೂ ವರ್ತಿಸುತ್ತಾರೆ. ಅವರು ಮತ್ತೊಬ್ಬರ ವಿಚಾರದ ಅಂಶವನ್ನು ನೋಡುವುದು ಅಥವಾ ನೋಡಲು ಯತ್ನಿಸುವುದೂ ವಿರಳ. ನೀವು ಅರ್ಥಮಾಡಿಕೊಳ್ಳದೆ, ಇನ್ನೊಬ್ಬರ ಜೊತೆಗೆ ಜಗಳವಾಡಲು ಆರಂಭಿಸಿದರೆ, ನೆನಪಿರಲಿ, ಯಾರೇ ವಾಗ್ಯುದ್ಧ ಆರಂಭಿಸಿದ್ದರೂ, ಇಬ್ಬರೂ ಸಮಾನ ದೋಷಿಗಳು. “ಮೂರ್ಖರು ವಾದಿಸುತ್ತಾರೆ, ಜಾಣರು ಚರ್ಚಿಸುತ್ತಾರೆ.”

ಸಮಾಧಾನದಿಂದಿರಬೇಕು ಎಂದರೆ, ನೀವು ಎಲ್ಲರೊಂದಿಗೆ ಸದಾ ನಗುತ್ತಿರಬೇಕೆಂದೂ ಅವರೇನೇ ಹೇಳಿದರೂ ಒಪ್ಪಿಕೊಳ್ಳಬೇಕು ಎಂದು ಅರ್ಥವಲ್ಲ — ಅಂದರೆ ನಿಮಗೆ ಸತ್ಯದ ಬಗ್ಗೆ ಗೌರವವಿದೆ, ಆದರೆ ಅದರಿಂದ ಯಾರನ್ನೂ ಸಿಟ್ಟಿಗೆಬ್ಬಿಸಲು ನಿಮಗಿಷ್ಟವಿಲ್ಲ. ಇದು ಅತಿರೇಕವಾಯಿತು. ತಮ್ಮ ಒಳ್ಳೆಯ ಗುಣವನ್ನು ಇತರರು ಹೊಗಳಲೆಂದು, ಹೀಗೆ ಎಲ್ಲರನ್ನೂ ಸಂತುಷ್ಟಗೊಳಿಸಲು ಪ್ರಯತ್ನಿಸುವವರಿಗೆ, ತಮ್ಮ ಭಾವನೆಗಳ ಮೇಲೆ ನಿಯಂತ್ರಣವಿದೆ ಎಂದು ಹೇಳಲಾಗುವುದಿಲ್ಲ….ಯಾರಿಗೆ ತಮ್ಮ ಭಾವನೆಗಳ ಮೇಲೆ ನಿಯಂತ್ರಣವಿದೆಯೋ ಅವರು ಸತ್ಯವನ್ನೇ ನುಡಿಯುತ್ತಾರೆ, ಆ ಸತ್ಯವನ್ನು ಎಲ್ಲೆಲ್ಲಿ ಸಾಧ್ಯವೋ ಅಲ್ಲೆಲ್ಲ ಹಂಚಿಕೊಳ್ಳುತ್ತಾರೆ, ಹಾಗೂ ಕೇಳಿಸಿಕೊಳ್ಳಲು ಸಿದ್ಧರಿಲ್ಲದ ಯಾರನ್ನೇ ಆಗಲಿ ಅವರು ಅನವಶ್ಯಕವಾಗಿ ರೇಗಿಸುವುದಿಲ್ಲ. ಅವರಿಗೆ ಯಾವಾಗ ಮಾತನಾಡಬೇಕು ಹಾಗೂ ಯಾವಾಗ ಸುಮ್ಮನಿರಬೇಕು ಎಂದು ತಿಳಿದಿರುತ್ತದೆ, ಆದರೆ ಅವರು ತಮ್ಮ ಆದರ್ಶ ಮತ್ತು ಅಂತರಂಗದ ಶಾಂತಿಯೊಂದಿಗೆ ಎಂದಿಗೂ ರಾಜಿ ಮಾಡಿಕೊಳ್ಳುವುದಿಲ್ಲ. ಅಂತಹ ವ್ಯಕ್ತಿಯು ಪ್ರಪಂಚದಲ್ಲಿ ಒಳ್ಳೆಯದನ್ನು ಮಾಡುವ ದೊಡ್ಡ ಶಕ್ತಿಯಾಗಿರುತ್ತಾನೆ.

ನಾವು ಪ್ರಾಮಾಣಿಕವಾದ ಸೌಜನ್ಯ ಭಾಷೆಯೆಂಬ ನವಿರಾದ ಉಡುಪನ್ನು ಧರಿಸಿ ಆಕರ್ಷಕವಾಗಿರಬೇಕು. ನಾವು ಮೊದಲು ನಮ್ಮ ಹತ್ತಿರದ ಬಂಧುಗಳೊಂದಿಗೆ ಸೌಜನ್ಯಶೀಲರಾಗಿರಬೇಕು. ಒಬ್ಬನು ಹಾಗೆ ಮಾಡಲು ಸಾಧ್ಯವಾದಾಗ ಎಲ್ಲರೊಂದಿಗೂ ಅವನು ಸಹಜವಾಗಿಯೇ ಸೌಹಾರ್ದದಿಂದಿರುತ್ತಾನೆ. ನಿಜವಾದ ಕೌಟುಂಬಿಕ ಸುಖದ ತಳಹದಿಯಿರುವುದು ಅರ್ಥಮಾಡಿಕೊಳ್ಳುವುದರಲ್ಲಿ ಮತ್ತು ಮೃದುವಾದ ಮಾತುಗಳಲ್ಲಿ. ಸೌಜನ್ಯತೆ ತೋರಿಸಬೇಕು ಎಂಬ ಕಾರಣಕ್ಕಾಗಿ ನಾವು ಎಲ್ಲದಕ್ಕೂ ಸಮ್ಮತಿಸಬೇಕಾಗಿಲ್ಲ. ಬೇರೆಯವರೊಂದಿಗೆ ಸಹಮತವಿರಲಿ ಬಿಡಲಿ, ಶಾಂತವಾದ ಮೌನ, ಪ್ರಾಮಾಣಿಕತೆ ಮತ್ತು ಮರ್ಯಾದೆಯುಳ್ಳ ಮಾತುಗಳು, ಹೇಗೆ ವರ್ತಿಸಬೇಕು ಎಂದು ತಿಳಿದವನ ಕುರುಹಾಗಿರುತ್ತದೆ.

ನಿಮಗೆ ಬೇರೆಯವರ ಪ್ರೀತಿ ಬೇಕಾಗಿದ್ದಲ್ಲಿ, ಪ್ರೀತಿಯ ಅವಶ್ಯಕತೆಯಿರುವವರನ್ನು ಪ್ರೀತಿಸಿ….ನಿಮಗೆ ಸಹಾನುಭೂತಿ ಬೇಕೆಂದಿದ್ದರೆ, ನಿಮ್ಮ ಸುತ್ತಲಿನವರಿಗೆ ಸಹಾನುಭೂತಿ ತೋರಿಸಲು ಆರಂಭಿಸಿ. ನಿಮಗೆ ಬೇರೆಯವರು ಗೌರವ ಸೂಚಿಸಬೇಕೆಂದಿದ್ದರೆ, ನೀವು ಎಲ್ಲರೊಂದಿಗೆ ಅಂದರೆ ಚಿಕ್ಕವರೊಂದಿಗೂ ದೊಡ್ಡವರೊಂದಿಗೂ, ಗೌರವದಿಂದ ನಡೆದುಕೊಳ್ಳಲು ಕಲಿಯಬೇಕು….ನಿಮಗೆ ಬೇರೆಯವರು ನಿಮ್ಮೊಂದಿಗೆ ಹೇಗಿರಬೇಕೆಂದಿದೆಯೋ, ಮೊದಲು ನೀವು ಹಾಗಿರಿ; ಆಗ ಬೇರೆಯವರು ನಿಮಗೆ ಹಾಗೆಯೇ ಪ್ರತಿಕ್ರಿಯಿಸುವುದನ್ನು ಕಾಣುವಿರಿ.

ವಿವಾಹದ ಆಧ್ಯಾತ್ಮಿಕ ಸೂತ್ರಗಳು

ನೀರಿನ ಮೇಲೆ ಪ್ರತಿಬಿಂಬಿಸುವ ಹಂಸಗಳು.

ಪರಸ್ಪರರ ದೈವಸಾಕ್ಷಾತ್ಕಾರಕ್ಕೆ ನೆರವಾಗಲೆಂದು ಇಬ್ಬರು ವ್ಯಕ್ತಿಗಳು ತಮ್ಮ ಜೀವನವನ್ನು ಒಗ್ಗೂಡಿಸಿದಾಗ ತಮ್ಮ ವಿವಾಹವನ್ನು ನಿಜವಾದ ತಳಹದಿಯ ಮೇಲೆ ಅರ್ಥಾತ್ ಅನಿರ್ಬಂಧಿತ ಸ್ನೇಹದ ಮೇಲೆ ಸ್ಥಾಪಿಸುತ್ತಾರೆ.

ಪತಿಪತ್ನಿಯರ ನಡುವೆ, ಮಾತಾಪಿತೃಗಳು ಮತ್ತು ಮಕ್ಕಳ ನಡುವೆ, ಸ್ನೇಹಿತರ ನಡುವೆ, ನಮ್ಮ ಮತ್ತು ಮಿಕ್ಕೆಲ್ಲರ ನಡುವೆಯೂ ಪರಿಶುದ್ಧವಾದ ಮತ್ತು ಷರತ್ತಿಲ್ಲದ ಪ್ರೇಮವನ್ನು ಬೆಳೆಸಿಕೊಳ್ಳುವ ಪಾಠವನ್ನು ಕಲಿಯಲೆಂದೇ ನಾವು ಈ ಭೂಲೋಕಕ್ಕೆ ಬಂದಿದ್ದೇವೆ.

ನಿಜವಾದ ಮದುವೆಯು ಸ್ವಾರ್ಥಪರತೆ, ಕೋಪ ಮತ್ತು ದುರ್ವರ್ತನೆಯಂತಹ ವಿಷಗಳನ್ನು ತಾಳ್ಮೆ ಎಂಬ ಪ್ರನಾಳದಲ್ಲಿ ಹಾಕಿ ಅದನ್ನು ಪ್ರೀತಿಯ ಹಾಗೂ ಉದಾತ್ತವಾಗಿ ವರ್ತಿಸಲು ಅವಿರತ ಪ್ರಯತ್ನಗಳ ವೇಗವರ್ಧನಾ ಶಕ್ತಿಯಿಂದ ತಟಸ್ಥಗೊಳಿಸುವ ಹಾಗೂ ಪರಿವರ್ತಿಸುವ ಪ್ರಯೋಗಾಲಯವಾಗಬೇಕು.

ನಿಮ್ಮ ಸಂಗಾತಿಯಲ್ಲಿರುವ ಒಂದು ಹವ್ಯಾಸ ಅಥವಾ ಗುಣವು ನಿಮ್ಮ ಮನಸ್ಸಿನಲ್ಲಿ ಅಸಹ್ಯವಾದ ಸ್ವಭಾವಗಳನ್ನು ಹುಟ್ಟುಹಾಕುತ್ತಿದ್ದರೆ, ಈ ಪರಿಸ್ಥಿತಿಯ ಉದ್ದೇಶ, ನಿಮ್ಮೊಳಗೆ ಹುದುಗಿರುವ ಆ ವಿಷಗಳನ್ನು ಹೊರತರುವುದಕ್ಕಾಗಿ ಹಾಗೂ ಅದರಿಂದಾಗಿ ನೀವು ಅವುಗಳನ್ನು ನಿವಾರಿಸಿಕೊಂಡು ನಿಮ್ಮ ಸ್ವಭಾವವನ್ನು ಪರಿಶುದ್ಧಗೊಳಿಸಿಕೊಳ್ಳಬಹುದು ಎಂಬ ಕಾರಣಕ್ಕಾಗಿ ಎಂದು ನೀವು ಅರ್ಥ ಮಾಡಿಕೊಳ್ಳಬೇಕು.

ಪತಿ ಅಥವಾ ಪತ್ನಿಯು ತನ್ನ ಬಾಳ ಸಂಗಾತಿಗೆ ಬಯಸಬಹುದಾದ ಅತ್ಯಂತ ಉದಾತ್ತವಾದ ಗುಣವೆಂದರೆ ಆಧ್ಯಾತ್ಮಿಕತೆ; ಏಕೆಂದರೆ ಆಧ್ಯಾತ್ಮಿಕ ವಿಕಸನವು ದೈವೀಗುಣಗಳಾದ ವಿವೇಚನೆ, ಸಹನೆ, ವಿಚಾರಪೂರ್ಣತೆ, ಪ್ರೇಮ ಮುಂತಾದುವನ್ನು ಹೊರತರುತ್ತದೆ. ಆದರೆ ಆಧ್ಯಾತ್ಮಿಕ ಬೆಳವಣಿಗೆಯ ಬಯಕೆಯನ್ನು ಮತ್ತೊಬ್ಬರ ಮೇಲೆ ಹೇರಲಾಗದು ಎಂಬುದನ್ನು ಇಬ್ಬರೂ ನೆನಪಿಡಬೇಕು. ನೀವು ಪ್ರೇಮದಿಂದ ಬಾಳಿ, ಆಗ ನಿಮ್ಮ ಒಳ್ಳೆಯತನವು ನಿಮ್ಮೆಲ್ಲ ಪ್ರೀತಿಪಾತ್ರರಿಗೂ ಸ್ಫೂರ್ತಿ ನೀಡುತ್ತದೆ.

ಪತ್ನಿಯು ಸುಖಿಯಾಗಿರಲೆಂದು ಪತಿ ಹಾಗೂ ಪತಿ ಸುಖಿ ಯಾಗಿರಲೆಂದು ಪತ್ನಿಯು ಪರಸ್ಪರರ ಸೇವೆಯನ್ನು ಮಾಡಿದಾಗ ಕ್ರಿಸ್ತ (ಕೂಟಸ್ಥ) ಪ್ರಜ್ಞೆಯು — ಸೃಷ್ಟಿಯ ಕಣ ಕಣವನ್ನೂ ಆವರಿಸಿರುವ ಭಗವಂತನ ಪ್ರೀತಿಪೂರ್ವಕ ವಿಶ್ವ ಪ್ರಜ್ಞಾನವು — ಅವರ ಪ್ರಜ್ಞೆಯ ಮೂಲಕ ತನ್ನನ್ನು ತಾನು ಅಭಿವ್ಯಕ್ತಿಸಲು ಪ್ರಾರಂಭಿಸುತ್ತದೆ.

ಯಾವಾಗ ಇಬ್ಬರಲ್ಲಿ ಪರಸ್ಪರ ಅನಿರ್ಬಂಧಿತ ಆಕರ್ಷಣೆ ಉಂಟಾಗುವುದೋ, ಮತ್ತು ಪರಸ್ಪರ ತ್ಯಾಗಕ್ಕೆ ಸಿದ್ಧರಾಗುವರೋ ಆಗ ಅವರಲ್ಲಿ ನಿಜವಾದ ಪ್ರೇಮ ಇರುತ್ತದೆ.

ಪ್ರೀತಿಪಾತ್ರರ ಪರಿಪೂರ್ಣತೆಯನ್ನು ಬಯಸುವುದು, ಹಾಗೂ ಆ ಆತ್ಮದ ನೆನಪಿನಲ್ಲಿ ಪರಿಶುದ್ಧ ಆನಂದವನ್ನು ಅನುಭವಿಸುವುದೇ, ದಿವ್ಯ ಪ್ರೇಮ; ಮತ್ತು ಅದೇ ನಿಜವಾದ ಸ್ನೇಹದ ಪ್ರೇಮ.

ಪ್ರತಿದಿನ ಬೆಳಿಗ್ಗೆ ಹಾಗೂ ವಿಶೇಷವಾಗಿ ರಾತ್ರಿಯ ಹೊತ್ತಿನಲ್ಲಿ ಒಟ್ಟಿಗೆ ಧ್ಯಾನ ಮಾಡಿ….ಪತಿಪತ್ನಿ ಮತ್ತು ಮಕ್ಕಳು ಭಗವಂತನಲ್ಲಿ ಆಳವಾದ ಭಕ್ತಿಯನ್ನು ನಿವೇದಿಸಿಕೊಳ್ಳಲು ಹಾಗೂ ಅವರೆಲ್ಲರ ಆತ್ಮಗಳು ಶಾಶ್ವತವಾಗಿ ನಿತ್ಯ ಆನಂದದ ವಿಶ್ವಪ್ರಜ್ಞೆಯಲ್ಲಿ ಒಂದಾಗಲು ಒಟ್ಟುಗೂಡುವಂತೆ ಮನೆಯಲ್ಲಿ ಒಂದು ಚಿಕ್ಕ ಕೌಟುಂಬಿಕ ಪೂಜಾಪೀಠವನ್ನಿಟ್ಟುಕೊಳ್ಳಿ….ನೀವು ಜೊತೆಗೂಡಿ ಧ್ಯಾನ ಮಾಡಿದಷ್ಟೂ, ನಿಮ್ಮೊಳಗೆ ಪರಸ್ಪರರ ಪ್ರೀತಿಯು ಆಳವಾಗುತ್ತ ಹೋಗುತ್ತದೆ.

ದೃಢೀಕರಣ

ದೃಢೀಕರಣದ ಸಿದ್ದಾಂತ ಹಾಗೂ ಸೂಚನೆಗಳು

“ಇತರರೆಡೆಗೆ ಪ್ರೀತಿ ಮತ್ತು ಸದ್ಭಾವನೆಗಳನ್ನು ಹೊರಸೂಸುತ್ತಾ ಭಗವಂತನ ಪ್ರೀತಿಯು ನನ್ನೆಡೆಗೆ ಬರುವ ಕಾಲುವೆಯನ್ನು ತೆರೆಯುತ್ತೇನೆ. ಎಲ್ಲಾ ಒಳಿತನ್ನು ನನ್ನಡೆಗೆ ಆಕರ್ಷಿಸುವ ಅಯಸ್ಕಾಂತವೇ ಭಗವಂತನ ಪ್ರೀತಿ.”

ಹೆಚ್ಚಿನ ಅಧ್ಯಯನಕ್ಕಾಗಿ

ಇದನ್ನು ಹಂಚಿಕೊಳ್ಳಿ