
“ಪ್ರಾರ್ಥನೆಯು ಆತ್ಮದ ಒತ್ತಾಯಪೂರ್ವಕ ಕೋರಿಕೆ. ಭಗವಂತನು ನಮ್ಮನ್ನು ಭಿಕ್ಷುಕರನ್ನಾಗಿ ಮಾಡಲಿಲ್ಲ; ಅವನು ನಮ್ಮನ್ನು ಅವನ ಪ್ರತಿರೂಪದಲ್ಲಿ ಸೃಷ್ಟಿಸಿದ್ದಾನೆ…ಒಬ್ಬ ಭಿಕ್ಷುಕ ಒಬ್ಬ ಸಿರಿವಂತನ ಮನೆಗೆ ಹೋಗಿ ಭಿಕ್ಷೆಯನ್ನು ಬೇಡಿದರೆ, ಭಿಕ್ಷುಕನ ಪಾಲನ್ನೇ ಪಡೆಯುತ್ತಾನೆ; ಆದರೆ ಮಗನು ತನ್ನ ಸಿರಿವಂತ ತಂದೆಯಿಂದ, ಕೇಳಿದ್ದೆಲ್ಲವನ್ನೂ ಪಡೆಯುತ್ತಾನೆ…
“ಆದ್ದರಿಂದ ನಾವು ಭಿಕ್ಷುಕರ ತರಹ ವರ್ತಿಸಬಾರದು. ಏಸು, ಕೃಷ್ಣ ಹಾಗೂ ಬುದ್ಧನಂತಹ ದಿವ್ಯಾತ್ಮಗಳು ನಾವು ಭಗವಂತನ ಪ್ರತಿರೂಪದಲ್ಲಿ ಮಾಡಲ್ಪಟ್ಟಿದ್ದೇವೆ ಎಂದು ಹೇಳಿದಾಗ, ಸುಳ್ಳನ್ನೇನೂ ಹೇಳಲಿಲ್ಲ.”
—ಪರಮಹಂಸ ಯೋಗಾನಂದ
ಶ್ರೀ ಶ್ರೀ ಪರಮಹಂಸ ಯೋಗಾನಂದರ ಬರಹಗಳಿಂದ ಆಯ್ದ ಭಾಗಗಳು
ಭಾರತದ ಪುರಾತನ ವೈಜ್ಞಾನಿಕ ಋಷಿಗಳು, ಒಬ್ಬ ಪ್ರೇಮಪೂರ್ಣ ಭಗವಂತನೊಂದಿಗೆ ಆನಂದದ ಅದ್ವಿತೀಯ ಸಂಸರ್ಗವನ್ನು ಮನಗಾಣುವುದು ಹೇಗೆ ಎಂದು ಮನಗಂಡಿದ್ದರು. ಧ್ಯಾನದ ಯೋಗ ವಿಜ್ಞಾನದ ಮೂಲಕ ಹಾಗೂ ಒಂದು ಹೊಸ ಬಗೆಯಲ್ಲಿ ಪ್ರಾರ್ಥಿಸುವುದರ ಮೂಲಕ ನಾವು ಕೂಡ ಅದೇ ರೀತಿಯ ಪ್ರತ್ಯಕ್ಷಾನುಭವವನ್ನು ಪಡೆಯಬಹುದು ಎಂದು ಪರಮಹಂಸ ಯೋಗಾನಂದರು ನಮಗೆ ಕಲಿಸುತ್ತಾರೆ. ಅವರು ಬರೆದಿದ್ದಾರೆ:
“ʼಪ್ರಾರ್ಥನೆʼಗೆ ಬದಲಾಗಿ ನಾನು ʼಹಕ್ಕೊತ್ತಾಯʼ ಶಬ್ದವನ್ನು ಇಷ್ಟಪಡುತ್ತೇನೆ, ಏಕೆಂದರೆ ಎರಡನೆಯದರಲ್ಲಿ, ನಾವು ಭಿಕ್ಷುಕರಂತೆ ದೇವರನ್ನು ಒಬ್ಬ ಕ್ರೂರರಾಜ ಎಂಬಂತೆ ಯಾಚಿಸಬೇಕು ಮತ್ತು ಮುಖಸ್ತುತಿ ಮಾಡಬೇಕು ಎಂಬ ಪುರಾತನ ಮತ್ತು ಓಬಿರಾಯನ ಕಾಲದ ಕಲ್ಪನೆಯು ಇರುವುದಿಲ್ಲ. ಸಾಧಾರಣ ಪ್ರಾರ್ಥನೆಯಲ್ಲಿ ದಟ್ಟ ದಾರಿದ್ರ್ಯ ಹಾಗೂ ಅಜ್ಞಾನವಿರುತ್ತದೆ…ಬಹಳ ಕೆಲವೇ ಮಂದಿ ಮಾತ್ರ ಪ್ರಾರ್ಥಿಸಿ ಭಗವಂತನನ್ನು ಹೇಗೆ ಮುಟ್ಟಬಹುದು ಎಂಬುದನ್ನು ಅರಿತಿರುತ್ತಾರೆ.”

“ಭಗವಂತನಿಂದ ಹಕ್ಕೊತ್ತಾಯವನ್ನು ಮಾಡಲು ನೀವು ಅವನಿಂದ ಸರ್ವೋತ್ಕೃಷ್ಟವಾದ ಹಕ್ಕನ್ನು ಉತ್ತರಾಧಿಕಾರದಿಂದ ಪಡೆದಿದ್ದೀರಿ; ಮತ್ತು ನೀವು ಅವನ ಸ್ವಂತದವರಾಗಿರುವುದರಿಂದ ಅವನು ನಿಮಗೆ ಪ್ರತಿಸ್ಪಂದಿಸುತ್ತಾನೆ. ನೀವು ನಿರಂತರವಾಗಿ ಅವನಿಗೆ ಕರೆ ನೀಡಿದರೆ, ಅವನು ನಿಮ್ಮ ಭಕ್ತಿಯ ಬಲೆಯಿಂದ ತಪ್ಪಿಸಿಕೊಳ್ಳಲಾರ. ಆಕಾಶವು ನಿಮ್ಮ ಪ್ರಾರ್ಥನೆಯ ಬೆಳಕಿನಿಂದ ಮಥಿಸುವವರೆಗೂ ನೀವು ಪ್ರಾರ್ಥಿಸಿದಲ್ಲಿ, ನೀವು ಭಗವಂತನನ್ನು ಕಾಣುವಿರಿ.”

ನನ್ನ ಪ್ರಾರ್ಥನೆಗಳು ಹೇಗೆ ಇತರರಿಗೆ ಸಹಾಯ ಮಾಡುತ್ತವೆ?
ಶ್ರೀ ದಯಾ ಮಾತಾ
ಸಮಯ: 4:26 ನಿಮಿಷಗಳು
ಈ ಸವಾಲಿನ ಸಮಯಗಳಲ್ಲಿ, ಪ್ರಾರ್ಥನೆಯ ಶಕ್ತಿಯ ಮೂಲಕ ನಾವು ಬಹಳಷ್ಟನ್ನು ಮಾಡಬಹುದು – ನಮಗಾಗಿ ಮಾತ್ರವಲ್ಲ, ಬದಲಾಗಿ ನಮ್ಮ ಕುಟುಂಬಗಳು, ನಮ್ಮ ಸ್ನೇಹಿತರು, ನಮ್ಮ ನೆರೆಹೊರೆಯವರು ಮತ್ತು ಜಗತ್ತಿಗೆ ಸೇವೆ ಸಲ್ಲಿಸಲು.
ಯೋಗದಾ ಸತ್ಸಂಗ ಪಾಠಗಳ ಮೂಲಕ ನೀವು ಯೋಗದ ಪರಿಣಾಮಕಾರಿ ಪ್ರಾರ್ಥನೆಯ ತಂತ್ರಗಳನ್ನು ಕಲಿಯಬಹುದು ಮತ್ತು ಭಗವಂತನೊಡನೆ ನಿಮ್ಮದೇ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳಬಹುದು.