ನಿಮ್ಮ ಎಲ್ಲಾ ಸಮಸ್ಯೆಗಳ ಪರಿಹಾರವನ್ನು ಭಗವಂತನಿಂದ ಪಡೆಯಲು ಪ್ರಯತ್ನಿಸಿ. ಅಗಾಧವಾದ ಸಮಸ್ಯೆಗಳು ಹಠಾತ್ ಹಿಮಪಾತದಂತೆ ನಿಮ್ಮ ಮೇಲೆರಗಿದಾಗ ನಿಮ್ಮ ಧೈರ್ಯ ಹಾಗೂ ಚುರುಕು ಬುದ್ಧಿಯನ್ನು ನಿಷ್ಕ್ರಿಯವಾಗಲು ಬಿಡಬೇಡಿ. ಅಂತರ್ಬೋಧೆಯ ನಿಮ್ಮ ಸಾಮಾನ್ಯ ಜ್ಞಾನವನ್ನು ಮತ್ತು ಭಗವಂತನಲ್ಲಿ ನಿಮ್ಮ ವಿಶ್ವಾಸವನ್ನು ಜಾಗೃತವಾಗಿರಿಸಿ ಹಾಗೂ ಪಾರಾಗುವ ಅತ್ಯಲ್ಪ ಸಣ್ಣ ಮಾರ್ಗವನ್ನಾದರೂ ಕಂಡುಕೊಳ್ಳಲು ಪ್ರಯತ್ನಿಸಿ, ಮತ್ತು ನೀವು ಆ ಮಾರ್ಗವನ್ನು ಕಂಡುಕೊಳ್ಳುವಿರಿ. ಕೊನೆಯಲ್ಲಿ ಎಲ್ಲವೂ ಒಳ್ಳೆಯದಾಗುತ್ತದೆ, ಏಕೆಂದರೆ ಮರ್ತ್ಯ ಅಸ್ತಿತ್ವದ ವಿರೋಧಾಭಾಸಗಳ ತೋರಿಕೆಯ ಹಿಂದೆ ಭಗವಂತ ತನ್ನ ಒಳ್ಳೆಯತನವನ್ನು ಮರೆಮಾಚಿದ್ದಾನೆ.
— ವೈನ್ ಆಫ್ ದ ಮಿಸ್ಟಿಕ್

ಯಾವುದಕ್ಕೂ ಹೆದರದಿರಿ. ಚಂಡಮಾರುತದಲ್ಲಿ ಅಲೆಯ ಮೇಲೆ ಅತ್ತಿತ್ತ ಹೊಯ್ದಾಡುತ್ತಿರುವಾಗಲೂ, ನೀವು ಸಾಗರದ ವಕ್ಷಸ್ಥಳದ ಮೇಲೇ ಇರುತ್ತೀರಿ. ದೇವರ ಅಂತರ್ನಿಹಿತ ಸಾನಿಧ್ಯದ ಪ್ರಜ್ಞೆಯನ್ನು ಯಾವಾಗಲೂ ಹಿಡಿದುಕೊಂಡಿರಿ. ಸಮಚಿತ್ತದಿಂದಿರಿ ಹಾಗೂ ಹೀಗೆ ಹೇಳಿಕೊಳ್ಳಿ: “ನಾನು ನಿರ್ಭೀತ; ನಾನು ದೇವರ ಅಂಶದಿಂದ ಸೃಷ್ಟಿಸಲ್ಪಟ್ಟಿದ್ದೇನೆ. ನಾನು ಚೇತನದ ಅಗ್ನಿಯ ಒಂದು ಕಿಡಿ. ನಾನು ಬ್ರಹ್ಮಾಂಡ ಜ್ವಾಲೆಯ ಒಂದು ಅಣು. ನಾನು ದೇವರ ಅಗಾಧ ವಿಶ್ವವ್ಯಾಪಿ ಶರೀರದ ಒಂದು ಜೀವಕೋಶ. ‘ನಾನು ಮತ್ತು ನನ್ನ ತಂದೆ ಒಂದೇ.’”
ನಿಜವಾದ ಸ್ವಾತಂತ್ರ್ಯವಿರುವುದು ಭಗವಂತನಲ್ಲಿ ಮಾತ್ರ. ಆದ್ದರಿಂದ ಬೆಳಿಗ್ಗೆ ಮತ್ತು ರಾತ್ರಿ ಧ್ಯಾನದಲ್ಲಿ ಅವನನ್ನು ಸಂಪರ್ಕಿಸಲು ತೀವ್ರವಾಗಿ ಪ್ರಯತ್ನಿಸಿ.…ಭಗವಂತನಿದ್ದಲ್ಲಿ ಭಯವಿಲ್ಲ, ದುಃಖವಿಲ್ಲ ಎಂದು ಯೋಗ ಬೋಧಿಸುತ್ತದೆ. ಒಡೆದು ಹೋಳಾಗಿ ಅಪ್ಪಳಿಸುತ್ತಿರುವ ಪ್ರಪಂಚಗಳ ಮಧ್ಯೆ ಯಶಸ್ವೀ ಯೋಗಿಯು ಅಚಲನಾಗಿ ನಿಲ್ಲಬಲ್ಲ.
— ಪರಮಹಂಸ ಯೋಗಾನಂದ
ಭಗವಂತನು ಆರೋಗ್ಯ, ಸಮೃದ್ಧಿ, ಜ್ಞಾನ, ಹಾಗೂ ಶಾಶ್ವತ ಆನಂದದ ಕಾರಂಜಿ. ನಾವು ನಮ್ಮ ಜೀವನವನ್ನು ಭಗವಂತನ ಸಂಸ್ಪರ್ಶದಿಂದ ಪರಿಪೂರ್ಣ ಮಾಡಿಕೊಳ್ಳುತ್ತೇವೆ. ಅವನಿಲ್ಲದ ಜೀವನ ಪರಿಪೂರ್ಣವಾಗುವುದಿಲ್ಲ. ನಿಮಗೆ ಜೀವನ, ಶಕ್ತಿ ಹಾಗೂ ಜ್ಞಾನವನ್ನು ದಯಪಾಲಿಸುತ್ತಿರುವ ಸರ್ವಸಮರ್ಥನ ಶಕ್ತಿಯ ಮೇಲೆ ನಿಮ್ಮ ಗಮನವನ್ನಿರಿಸಿ. ನಿರಂತರ ಸತ್ಯವು ನಿಮ್ಮ ಮನಸ್ಸಿಗೆ ಹರಿದುಬರಲಿ, ನಿರಂತರ ಶಕ್ತಿಯು ನಿಮ್ಮ ದೇಹದೊಳಗೆ ಹರಿದುಬರಲಿ, ಹಾಗೂ ನಿರಂತರ ಆನಂದವು ನಿಮ್ಮ ಆತ್ಮಕ್ಕೆ ಹರಿದುಬರಲಿ ಎಂದು ಪ್ರಾರ್ಥಿಸಿ. ಮುಚ್ಚಿದ ಕಣ್ಣುಗಳ ಕತ್ತಲೆಯ ಹಿಂದೆಯೇ ವಿಶ್ವದ ಅದ್ಭುತ ಶಕ್ತಿಗಳು, ಹಾಗೂ ಎಲ್ಲಾ ಮಹಾನ್ ಸಂತರು; ಹಾಗೂ ಅಂತ್ಯವಿಲ್ಲದ ಅನಂತತೆಯಿರುವುದು. ಧ್ಯಾನಮಾಡಿ, ಆಗ ನೀವು ಸರ್ವವ್ಯಾಪಿ ಪರಬ್ರಹ್ಮನ ಸತ್ಯವನ್ನು ಅರಿಯುವಿರಿ ಹಾಗೂ ಅದರ ನಿಗೂಢ ಕಾರ್ಯಗಳನ್ನು ನಿಮ್ಮ ಜೀವನದಲ್ಲಿ ಹಾಗೂ ಸೃಷ್ಟಿಯ ಎಲ್ಲಾ ವಿಜೃಂಭಣೆಗಳಲ್ಲಿ ಕಾಣುವಿರಿ.
— ಜರ್ನಿ ಟು ಸೆಲ್ಫ್-ರಿಯಲೈಝೇಷನ್

ನೀವೆಲ್ಲರೂ ದೇವತೆಗಳೇ, ನೀವು ಅದನ್ನು ಅರಿತರೆ ಮಾತ್ರ. ನಿಮ್ಮ ಪ್ರಜ್ಞೆಯ ಅಲೆಯ ಹಿಂದೆ ಭಗವಂತನ ಇರುವಿನ ಸಾಗರವಿದೆ. ನೀವು ನಿಮ್ಮೊಳಗೆ ನೋಡಬೇಕು. ದೌರ್ಬಲ್ಯಗಳಿಂದ ತುಂಬಿದ ದೇಹವೆಂಬ ಸಣ್ಣ ಅಲೆಯ ಮೇಲೆ ಗಮನವನ್ನು ಕೇಂದ್ರೀಕರಿಸಬೇಡಿ; ಅದರಡಿ ನೋಡಿ. ನಿಮ್ಮ ಪ್ರಜ್ಞೆಯನ್ನು ದೇಹ ಮತ್ತು ಅದರ ಅನುಭವಗಳಿಂದ ಮೇಲಕ್ಕೆತ್ತುತ್ತಿದಂತೆಯೇ, ನಿಮ್ಮ ಪ್ರಜ್ಞಾಗೋಳವು ನಕ್ಷತ್ರಗಳನ್ನು ಬೆಳಗುವ, ಅಂತೆ ಗಾಳಿಗೆ ಹಾಗೂ ಚಂಡಮಾರುತಕ್ಕೆ ಶಕ್ತಿನೀಡುವ, ಅಪಾರ ಸಂತೋಷ ಮತ್ತು ಆನಂದದಿಂದ ತುಂಬಿರುವುದನ್ನು ಕಾಣುವಿರಿ. ನಮ್ಮೆಲ್ಲ ಆನಂದಗಳ ಮತ್ತು ನಿಸರ್ಗದ ಎಲ್ಲಾ ಅಭಿವ್ಯಕ್ತಿಗಳ ಮೂಲವೇ ಪರಮಾತ್ಮ....
ನಿಮ್ಮನ್ನು ನೀವು ಅಜ್ಞಾನದ ಅಂಧಕಾರದಿಂದ ಎಚ್ಚರಿಸಿ. ಮಾಯೆಯೆಂಬ ನಿದ್ದೆಯಲ್ಲಿ ನಿಮ್ಮ ಕಣ್ಣುಗಳನ್ನು ಮುಚ್ಚಿಕೊಂಡಿರುವಿರಿ. ಎದ್ದೇಳಿ! ಕಣ್ಣು ತೆರೆಯಿರಿ, ಭಗವಂತನ ಮಹಿಮೆಯನ್ನು — ಎಲ್ಲಾ ವಸ್ತುಗಳ ಮೇಲೆ ಭಗವಂತನ ಬೆಳಕು ಹರಡುತ್ತಿರುವ ಅಗಾಧ ದೃಶ್ಯವನ್ನು ಕಾಣುವಿರಿ. ನಾನು ನಿಮಗೆ ದೈವೀ ವಾಸ್ತವವಾದಿಗಳಾಗಲು ಹೇಳುತ್ತಿದ್ದೇನೆ, ಆಗ ನಿಮ್ಮೆಲ್ಲಾ ಪ್ರಶ್ನೆಗಳಿಗೆ ಉತ್ತರವನ್ನು ಭಗವಂತನಲ್ಲಿ ಪಡೆಯುವಿರಿ.— ದ ಡಿವೈನ್ ರೋಮಾನ್ಸ್

ಕೇವಲ ತಮ್ಮ ಅಭ್ಯುದಯವನ್ನು ಮಾತ್ರ ಅರಸುವವರು ಕೊನೆಯಲ್ಲಿ ಬಡವರೇ ಆಗುತ್ತಾರೆ, ಅಥವಾ ಮಾನಸಿಕ ಅಸಾಮರಸ್ಯದಿಂದ ಬಳಲುತ್ತಾರೆ; ಆದರೆ ಇಡೀ ಜಗತ್ತೇ ತಮ್ಮದೆಂದು ಭಾವಿಸುವವರು, ನಿಜವಾದ ಕಳಕಳಿಯಿಂದ ಸಮೂಹದ ಅಥವಾ ಜಗತ್ತಿನ ಅಭ್ಯುದಯಕ್ಕಾಗಿ ಕೆಲಸ ಮಾಡುವವರು. ನ್ಯಾಯಸಮ್ಮತವಾದ ವೈಯಕ್ತಿಕ ಅಭ್ಯುದಯವನ್ನು ಕಂಡುಕೊಳ್ಳುತ್ತಾರೆ. ಇದೊಂದು ಖಚಿತ ಮತ್ತು ರಹಸ್ಯ ನಿಯಮ.
— ಯೋಗದಾ ಸತ್ಸಂಗ ಪಾಠಮಾಲಿಕೆ

ಜಗತ್ತಿನಲ್ಲಿ ಗಲಭೆಗಳು ಮತ್ತು ಕ್ಷೋಭೆಗಳು ಇದ್ದೇ ಇರುತ್ತವೆ. ನಿಮಗೇತರ ಚಿಂತೆ? ಭಗವಂತನಾಸರೆಗೆ ಹೋಗಿ, ಮಹಾತ್ಮರು ಹೋದಲ್ಲಿಗೆ, ಎಲ್ಲಿಂದ ಅವರು ಜಗತ್ತನ್ನು ವೀಕ್ಷಿಸುತ್ತ ಜಗತ್ತಿಗೆ ಸಹಾಯ ಮಾಡುತ್ತಿದ್ದಾರೋ ಅಲ್ಲಿಗೆ. ನಿಮಗೆ ಶಾಶ್ವತ ಸುರಕ್ಷತೆ ದೊರೆಯುತ್ತದೆ, ನಿಮಗೆ ಮಾತ್ರವಲ್ಲ, ನಮ್ಮ ಪ್ರಭು ಹಾಗೂ ತಂದೆಯಿಂದ ನಿಮ್ಮ ವಶಕ್ಕೆ ಜೋಪಾನ ಮಾಡಲೆಂದು ನೀಡಲ್ಪಟ್ಟ ಪ್ರೀತಿಪಾತ್ರರೆಲ್ಲರಿಗೂ.
— ಯೋಗದಾ ಸತ್ಸಂಗ ಪಾಠಮಾಲಿಕೆ

ಪ್ರಭುವನ್ನು ನಿಮ್ಮ ಆತ್ಮದ ಮಾರ್ಗದರ್ಶಕನನ್ನಾಗಿಸಿಕೊಳ್ಳಿ. ಹಾಗೂ ನೀವು ಜೀವನದಲ್ಲಿ ನೆರಳಿನ ಹಾದಿಯಲ್ಲಿ ಸಾಗುವಾಗ ಅವನನ್ನು ನಿಮ್ಮ ಶೋಧಕದೀಪವನ್ನಾಗಿಸಿಕೊಳ್ಳಿ. ಅಜ್ಞಾನದ ರಾತ್ರಿಯಲ್ಲಿ ಅವನು ನಿಮ್ಮ ಚಂದ್ರಮ. ಎಚ್ಚರವಾಗಿದ್ದಾಗ ಅವನು ನಿಮ್ಮ ಸೂರ್ಯ. ಹಾಗೂ ಮರ್ತ್ಯ ಅಸ್ತಿತ್ವದ ಕರಾಳ ಸಮುದ್ರದ ಮೇಲೆ ಅವನು ನಿಮ್ಮ ಧ್ರುವತಾರೆ. ಅವನ ಮಾರ್ಗದರ್ಶನವನ್ನು ಅರಸಿ. ಪ್ರಪಂಚವು ತನ್ನ ಏರಿಳಿತಗಳೊಂದಿಗೆ ಹೀಗೆಯೇ ಮುಂದುವರೆಯುತ್ತಿರುತ್ತದೆ. ಸರಿಯಾದ ಮಾರ್ಗದರ್ಶನಕ್ಕಾಗಿ ನಾವೆತ್ತ ನೋಡುವುದು? ನಮ್ಮ ರೂಢಿಗತ ಅಭ್ಯಾಸಗಳು ಹಾಗೂ ನಮ್ಮ ಕುಟುಂಬದ, ನಮ್ಮ ದೇಶದ ಮತ್ತು ನಮ್ಮ ಜಗತ್ತಿನ ಪರಿಸರದ ಪ್ರಭಾವಗಳಿಂದಾಗಿ ನಮ್ಮೊಳಗೇಳುವ ಪೂರ್ವಗ್ರಹಗಳತ್ತ ಅಲ್ಲ; ಆದರೆ ನಮ್ಮೊಳಗಿನ ಸತ್ಯದ ಮಾರ್ಗದರ್ಶಕ ದನಿಯೆಡೆಗೆ.
— ದ ಡಿವೈನ್ ರೋಮಾನ್ಸ್

ನೆನಪಿರಲಿ, ಮನಸ್ಸಿನ ಕೋಟಿ ತರ್ಕಗಳಿಗಿಂತ ದೊಡ್ಡದೆಂದರೆ, ನಿಮ್ಮೊಳಗೆ ಶಾಂತತೆಯ ಅನುಭವವಾಗುವವರೆಗೆ ಕುಳಿತು ಧ್ಯಾನ ಮಾಡುವುದು. ನಂತರ ಪ್ರಭುವಿಗೆ ಹೇಳಿ, “ನಾನು ಲಕ್ಷೋಪಲಕ್ಷ ವಿಧವಾಗಿ ಯೋಚಿಸಿದರೂ, ನಾನೊಬ್ಬನೇ ನನ್ನ ಸಮಸ್ಯೆಯನ್ನು ಬಗೆಹರಿಸಲಾರೆ, ಆದರೆ ಅದನ್ನು ನಿನ್ನ ಕೈಗಳಲ್ಲಿಟ್ಟು, ಮೊದಲು ನಿನ್ನ ಮಾರ್ಗದರ್ಶನವನ್ನು ಕೋರಿ, ನಂತರ ಸಂಭಾವ್ಯ ಪರಿಹಾರಕ್ಕಾಗಿ ಹಲವಾರು ದೃಷ್ಟಿಕೋನಗಳಿಂದ ಯೋಚಿಸುವ ಮೂಲಕ ಬಗೆಹರಿಸಿಕೊಳ್ಳಬಲ್ಲೆ.” ತಮಗೆ ತಾವು ಸಹಾಯ ಮಾಡಿಕೊಳ್ಳುವವರಿಗೆ ಭಗವಂತ ಸಹಾಯ ಮಾಡುತ್ತಾನೆ. ಧ್ಯಾನದಲ್ಲಿ ಭಗವಂತನ ಪ್ರಾರ್ಥನೆ ಮಾಡುವ ಮೂಲಕ ನಿಮ್ಮ ಮನಸ್ಸು ಶ್ರದ್ಧೆಯಿಂದ ತುಂಬಿ ಶಾಂತವಾಗಿದ್ದರೆ, ನಿಮಗೆ ನಿಮ್ಮ ಸಮಸ್ಯೆಗಳಿಗೆ ಹಲವಾರು ಉತ್ತರಗಳು ಕಾಣಿಸಿಕೊಳ್ಳುತ್ತವೆ; ನಿಮ್ಮ ಮನಸ್ಸು ಶಾಂತವಾಗಿರುವುದರಿಂದ ಅವುಗಳಲ್ಲಿ ನಿಮಗೆ ಅತ್ಯುತ್ತಮವಾದ ಪರಿಹಾರವನ್ನು ಆಯ್ದುಕೊಳ್ಳಲು ಸಹಾಯವಾಗುತ್ತದೆ. ಆ ಪರಿಹಾರಕ್ಕೆ ತಕ್ಕಂತೆ ನಡೆದುಕೊಳ್ಳಿ. ಯಶಸ್ಸು ನಿಮ್ಮದಾಗುತ್ತದೆ. ನಿಮ್ಮ ದೈನಂದಿನ ಜೀವನದಲ್ಲಿ ಧರ್ಮದ ವಿಜ್ಞಾನವನ್ನು ಬಳಸಿಕೊಳ್ಳುವುದೆಂದರೆ ಇದೇ.
— ದ ಡಿವೈನ್ ರೋಮಾನ್ಸ್

ಭಯವು ಹೃದಯದಿಂದ ಬರುತ್ತದೆ. ನಿಮಗೆ ಯಾವುದೋ ಒಂದು ರೋಗದ ಅಥವಾ ಅಪಘಾತದ ಭಯ ಆವರಿಸಿಕೊಂಡರೆ, ಆಳವಾಗಿ, ನಿಧಾನವಾಗಿ ಮತ್ತು ಲಯಬದ್ಧವಾಗಿ ಅನೇಕ ಬಾರಿ ಉಚ್ಛ್ವಾಸ, ನಿಶ್ವಾಸ ಮಾಡುತ್ತ, ಪ್ರತಿ ನಿಶ್ವಾಸದೊಂದಿಗೆ ದೇಹವನ್ನು ಸಡಿಲಿಸಿ. ಇದು ರಕ್ತಪರಿಚಲನೆ ಸಾಮಾನ್ಯ ಸ್ಥಿತಿಗೆ ಬರಲು ನೆರವಾಗುತ್ತದೆ. ನಿಮ್ಮ ಹೃದಯ ನಿಜವಾಗಿಯೂ ಶಾಂತವಾಗಿದ್ದರೆ ನಿಮಗೆ ಭಯದ ಅನುಭವವಾಗುವುದೇ ಇಲ್ಲ.
— ಭಯವಿಲ್ಲದೆ ಬದುಕುವುದು

ಯಾವುದರ ಬಗ್ಗೆ ನಿಮಗೆ ಭಯವಿದೆಯೋ, ಅದರಿಂದ ಮನಸ್ಸನ್ನು ದೂರವಿಡಿ ಹಾಗೂ ಅದನ್ನು ಭಗವಂತನಿಗೆ ಬಿಟ್ಟುಬಿಡಿ. ಅವನಲ್ಲಿ ವಿಶ್ವಾಸವಿರಲಿ. ಕೇವಲ ಚಿಂತೆಯ ಕಾರಣದಿಂದಲೇ ಹೆಚ್ಚಿನ ಕಷ್ಟದ ಅನುಭವವಾಗುತ್ತದೆ. ರೋಗ ಇನ್ನೂ ಬರದೇ ಇರುವಾಗ ಹೆದರುವುದೇಕೆ? ನಮ್ಮ ಬಹುತೇಕ ರೋಗಗಳು ಭಯದಿಂದ ಬರುವುದರಿಂದ ನೀವು ಭಯಪಡುವುದನ್ನು ಬಿಟ್ಟರೆ ತತ್ಕ್ಷಣವೇ ಮುಕ್ತರಾಗುವಿರಿ. ಉಪಶಮನ ಆ ಕೂಡಲೇ ಆಗುತ್ತದೆ. ಪ್ರತಿ ರಾತ್ರಿ ನೀವು ಮಲಗುವ ಮುನ್ನ ಹೀಗೆ ದೃಢೀಕರಿಸಿ: “ಭಗವಂತ ನನ್ನೊಡನಿದ್ದಾನೆ; ನಾನು ಸುರಕ್ಷಿತ.” ಮಾನಸಿಕವಾಗಿ ನಿಮ್ಮನ್ನು ಪರಮಾತ್ಮ ಮತ್ತು ಅವನ ವಿಶ್ವಶಕ್ತಿಯಿಂದ ಆವರಿಸಿಕೊಳ್ಳಿ….ಮೂರು ಬಾರಿ “ಓಂ” ಅಥವಾ “ಭಗವಂತಾ” ಎಂದು ಹೇಳಿ. ಇದು ನಿಮ್ಮನ್ನು ರಕ್ಷಿಸುತ್ತದೆ. ನಿಮಗೆ ಅವನ ಅದ್ಭುತ ರಕ್ಷಣೆಯ ಅನುಭವವಾಗುತ್ತದೆ. ನಿರ್ಭೀತಿಯಿಂದಿರಿ….
ನಿಮಗೆ ಭಯವಾದಾಗ ನಿಮ್ಮ ಕೈಯನ್ನು ಹೃದಯದ ಮೇಲೆ ಚರ್ಮಕ್ಕೆ ತಾಗಿಸಿಕೊಂಡು ಇಟ್ಟುಕೊಳ್ಳಿ; ಎಡದಿಂದ ಬಲಕ್ಕೆ ತಿಕ್ಕುತ್ತ ಹೇಳಿಕೊಳ್ಳಿ, “ಪ್ರಭೂ, ನಾನು ಮುಕ್ತ. ನನ್ನ ಹೃದಯ-ರೇಡಿಯೋದಿಂದ ಈ ಭಯವನ್ನು ದೂರಮಾಡು.” ಒಂದು ಸಾಮಾನ್ಯ ರೇಡಿಯೋದಲ್ಲಿ ನೀವು ಸ್ಥಾಯಿಯನ್ನು ಹೋಗಲಾಡಿಸುವಂತೆ, ಸತತವಾಗಿ ಎಡದಿಂದ ಬಲಕ್ಕೆ ಹೃದಯವನ್ನು ಉಜ್ಜಿದರೆ, ಹಾಗೂ ನಿಮ್ಮ ಹೃದಯದಿಂದ ಭಯವನ್ನು ದೂರಮಾಡಬೇಕೆಂಬ ವಿಚಾರದ ಮೇಲೆ ಸತತವಾಗಿ ಏಕಾಗ್ರಗೊಂಡಿದ್ದರೆ, ಅದು ಹೊರಟುಹೋಗುತ್ತದೆ; ಹಾಗೂ ಭಗವದಾನಂದದ ಅನುಭವವಾಗುತ್ತದೆ.— ಮ್ಯಾನ್ಸ್ ಇಟರ್ನಲ್ ಕ್ವೆಸ್ಟ್

ಭಗವಂತ ನಮಗೆ ರಕ್ಷಣೆಯ ಒಂದು ಅತ್ಯಮೋಘ ಸಾಧನವನ್ನು ಕೊಟ್ಟಿದ್ದಾನೆ — ಮಷಿನ್ಗನ್, ವಿದ್ಯುತ್ತು, ವಿಷಕಾರಿ ಅನಿಲ ಅಥವಾ ಯಾವುದೇ ಔಷಧಿಗಿಂತ ಪ್ರಬಲವಾದುದು, ಅದೇ ಮನಸ್ಸು. ಗಟ್ಟಿ ಮಾಡಬೇಕಾಗಿರುವುದು ಮನಸ್ಸನ್ನು....ಬದುಕಿನ ಸಾಹಸದ ಒಂದು ಮುಖ್ಯ ಭಾಗವೆಂದರೆ ಮನಸ್ಸನ್ನು ಹಿಡಿದಿರಿಸುವುದು, ಹಾಗೂ ಆ ನಿಯಂತ್ರಿತ ಮನಸ್ಸನ್ನು ಸತತವಾಗಿ ಭಗವಂತನಲ್ಲಿರಿಸುವುದು. ಇದು ಸುಖೀ ಮತ್ತು ಯಶಸ್ವೀ ಅಸ್ತಿತ್ವದ ರಹಸ್ಯ….ಅದು ಮಾನಸಿಕ ಶಕ್ತಿಯನ್ನು ಪ್ರಯೋಗಿಸುವುದರಿಂದ ಮತ್ತು ಧ್ಯಾನದಲ್ಲಿ ಮನಸ್ಸನ್ನು ಭಗವಂತನಲ್ಲಿ ಶ್ರುತಿಗೊಳಿಸುವುದರಿಂದ ಬರುತ್ತದೆ....ರೋಗ, ನಿರಾಶೆಗಳು ಮತ್ತು ಅನಾಹುತಗಳನ್ನು ಜಯಿಸುವ ಅತ್ಯಂತ ಸುಲಭದ ಮಾರ್ಗವೆಂದರೆ ನಿರಂತರವಾಗಿ ಭಗವಂತನೊಂದಿಗೆ ಶ್ರುತಿಗೊಂಡಿರುವುದು.
— ಮ್ಯಾನ್ಸ್ ಇಟರ್ನಲ್ ಕ್ವೆಸ್ಟ್

ನಿಜವಾದ ಸುಖ, ಶಾಶ್ವತ ಸುಖ ದೊರೆಯುವುದು ಭಗವಂತನಲ್ಲಿ, “ಯಾರನ್ನು ಹೊಂದುವುದರಿಂದ ಬೇರಾವ ಲಾಭವೂ ದೊಡ್ಡದೆನಿಸುವುದಿಲ್ಲವೊ ಅವನಲ್ಲಿ ಮಾತ್ರ.” ನಮ್ಮ ಎಲ್ಲಾ ಭಯಗಳಿಂದ ಏಕಮಾತ್ರ ಸುರಕ್ಷತೆ, ಏಕಮಾತ್ರ ಆಸರೆ, ಏಕಮಾತ್ರ ವಿಮೋಚನೆ ಇರುವುದು ಅವನಲ್ಲಿಯೇ. ನಿಮಗೆ ಈ ಜಗತ್ತಿನಲ್ಲಿ ಬೇರಾವ ರಕ್ಷಣೆಯೂ ಇಲ್ಲ, ಬೇರಾವ ಸ್ವಾತಂತ್ರ್ಯವೂ ಇಲ್ಲ. ನಿಜವಾದ ಸ್ವಾತಂತ್ರ್ಯವಿರುವುದು ಭಗವಂತನಲ್ಲಿ ಮಾತ್ರ. ಆದ್ದರಿಂದ ಬೆಳಿಗ್ಗೆ ಮತ್ತು ರಾತ್ರಿ ಧ್ಯಾನದಲ್ಲಿ, ಅಷ್ಟೇ ಅಲ್ಲದೆ ಇಡೀ ದಿನ ನೀವು ಮಾಡುವ ಎಲ್ಲ ಕೆಲಸ ಕಾರ್ಯಗಳಲ್ಲೂ ಅವನನ್ನು ಸಂಪರ್ಕಿಸಲು ತೀವ್ರವಾಗಿ ಪ್ರಯತ್ನಿಸಿ. ಭಗವಂತನಿದ್ದಲ್ಲಿ ಭಯವಿಲ್ಲ, ದುಃಖವಿಲ್ಲ ಎಂದು ಯೋಗ ಬೋಧಿಸುತ್ತದೆ. ಒಡೆದು ಹೋಳಾಗಿ ಅಪ್ಪಳಿಸುತ್ತಿರುವ ಪ್ರಪಂಚಗಳ ಮಧ್ಯೆ ಯಶಸ್ವೀ ಯೋಗಿಯು ಅಚಲನಾಗಿ ನಿಲ್ಲಬಲ್ಲ; “ಪ್ರಭು, ನಾನೆಲ್ಲಿರುವೆನೋ ಅಲ್ಲಿಗೆ ನೀನು ಬರಲೇಬೇಕು”, ಎಂಬ ಮನವರಿಕೆಯಲ್ಲಿ ಅವನು ಸುರಕ್ಷಿತನು.
— ದ ಡಿವೈನ್ ರೋಮಾನ್ಸ್

ಆತ್ಮಗಳ ಒಕ್ಕೂಟಕ್ಕಾಗಿ ಮತ್ತು ಸಂಯುಕ್ತ ವಿಶ್ವಕ್ಕಾಗಿ ನಾವು ನಮ್ಮ ಹೃದಯದಲ್ಲಿ ಪ್ರಾರ್ಥಿಸೋಣ. ಜನಾಂಗ, ಧರ್ಮ, ವರ್ಣ, ವರ್ಗ ಮತ್ತು ರಾಜಕೀಯ ಪೂರ್ವಾಗ್ರಹಗಳಿಂದ ನಾವು ವಿಭಜಿಸಲ್ಪಟ್ಟಿದ್ದೇವೆ ಎಂಬಂತೆ ಕಂಡರೂ, ಒಬ್ಬನೇ ಭಗವಂತನ ಮಕ್ಕಳಾಗಿ ನಾವು ನಮ್ಮ ಆತ್ಮಗಳಲ್ಲಿ ಭ್ರಾತೃತ್ವ ಮತ್ತು ವಿಶ್ವ ಐಕ್ಯತೆಯನ್ನು ಭಾವಿಸಲು ಸಮರ್ಥರಾಗಿದ್ದೇವೆ. ಜ್ಞಾನೋದಯ ಹೊಂದಿದ ಮಾನವನ ಆತ್ಮಸಾಕ್ಷಿಯ ಮೂಲಕ, ಭಗವಂತನಿಂದ ಮಾರ್ಗದರ್ಶಿಸಲ್ಪಡುವ ಪ್ರತಿಯೊಂದು ರಾಷ್ಟ್ರವು ಒಂದು ಉಪಯುಕ್ತ ಭಾಗವಾಗಿರುವಂತಹ ಸಂಯುಕ್ತ ವಿಶ್ವದ ಸೃಷ್ಟಿಗೆ ನಾವು ಕೆಲಸ ಮಾಡೋಣ. ನಮ್ಮ ಹೃದಯದಲ್ಲಿ ನಾವೆಲ್ಲರೂ ದ್ವೇಷ ಮತ್ತು ಸ್ವಾರ್ಥದಿಂದ ಮುಕ್ತರಾಗಲು ಕಲಿಯಲು ಸಾಧ್ಯವಿದೆ. ರಾಷ್ಟ್ರಗಳು ಸುಂದರವಾದ ಹೊಸ ನಾಗರಿಕತೆಯ ದ್ವಾರದ ಮೂಲಕ ಕೈಕೈ ಹಿಡಿದು ಸಾಗುವಂತಾಗಲು ಅವುಗಳ ನಡುವೆ ಸಾಮರಸ್ಯಕ್ಕಾಗಿ ನಾವು ಪ್ರಾರ್ಥಿಸೋಣ.
— ಮೆಟಾಫಿಸಿಕಲ್ ಮೆಡಿಟೇಷನ್ಸ್

ಎಲ್ಲಕ್ಕಿಂತ ಹೆಚ್ಚಾಗಿ ನೀವು ಧ್ಯಾನದ ಮೂಲಕ ಭಗವಂತನನ್ನು ಅರಸುವುದರಲ್ಲಿ ನಿರತರಾಗಬೇಕೆಂದು ನಾನು ಒತ್ತಿಹೇಳುತ್ತೇನೆ....ಈ ಜೀವನದ ನೆರಳುಗಳ ಅಡಿಯಲ್ಲೇ ಭಗವಂತನ ಅದ್ಭುತ ಬೆಳಕಿದೆ. ಈ ವಿಶ್ವವು ಅವನಿರುವ ಬೃಹತ್ ಮಂದಿರ. ನೀವು ಧ್ಯಾನ ಮಾಡುವಾಗ, ಎಲ್ಲೆಲ್ಲೂ ಬಾಗಿಲುಗಳು ಅವನೆಡೆಗೆ ತೆರೆಯುತ್ತಿರುವುದನ್ನು ಕಾಣುವಿರಿ. ನೀವು ಅವನ ಸಂಸರ್ಗವನ್ನು ಹೊಂದಿದಾಗ, ಆ ಆನಂದ ಮತ್ತು ಶಾಂತಿಯನ್ನು ಪ್ರಪಂಚದ ಯಾವುದೇ ವಿನಾಶಗಳು ದೂರಮಾಡಲಾರವು.
— ಜಾಗತಿಕ ಬಿಕ್ಕಟ್ಟು