ಇತರರಿಗಾಗಿ ಹೇಗೆ ಪ್ರಾರ್ಥಿಸುವುದು

ನಮ್ಮ ಪ್ರಾರ್ಥನೆಗಳು ಇತರರ ಜೀವನದ ಮೇಲೆ ಹೇಗೆ ಪ್ರಭಾವ ಬೀರಬಲ್ಲವು? ಅವು ಹೇಗೆ ನಮ್ಮ ಸ್ವಂತ ಜೀವನವನ್ನು- ಪ್ರಜ್ಞೆಯಲ್ಲಿ ಆರೋಗ್ಯ, ಯಶಸ್ಸು ಮತ್ತು ದೈವಿಕ ಸಹಾಯವನ್ನು ಸ್ವೀಕರಿಸುವ ಮನೋಭಾವದ ಸಕಾರಾತ್ಮಕ ಭಾವನೆಗಳನ್ನು ಬಿತ್ತುವುದರ ಮೂಲಕ ಉನ್ನತೀಕರಿಸುವಂತೆಯೇ ಇತರರ ಮೇಲೂ ಪ್ರಭಾವ ಬೀರಬಲ್ಲವು.

ವೈಎಸ್ಎಸ್/ಎಸ್‌ಆರ್‌ಎಫ್‌ನ ಮೂರನೆಯ ಅಧ್ಯಕ್ಷರು ಹಾಗೂ ಸಂಘಮಾತಾರಾಗಿ ಎಲ್ಲರ ಪ್ರೀತಿಪಾತ್ರರಾಗಿದ್ದ ಶ್ರೀ ದಯಾ ಮಾತಾರವರು ನೀಡಿರುವ “ನನ್ನ ಪ್ರಾರ್ಥನೆಗಳು ಇತರರಿಗೆ ಹೇಗೆ ಸಹಾಯ ಮಾಡಬಹುದು?” ಎಂಬ ಅತ್ಯಂತ ಪ್ರೇರಣಾದಾಯಕ ಕಿರು ವೀಡಿಯೊದಲ್ಲಿ, ಇತರರಿಗಾಗಿ ಪ್ರಾರ್ಥಿಸುವುದರ ಕುರಿತು ಪರಮಹಂಸ ಯೋಗಾನಂದರು ನೀಡಿರುವ ಮಹತ್ವವನ್ನು ಚರ್ಚಿಸುತ್ತಾರೆ. ಅಲ್ಲದೆ, ಪ್ರತಿಯೊಬ್ಬರೂ ಏಕಾಗ್ರತೆಯ ಪ್ರಾರ್ಥನೆಯ ಮಹತ್ತರ ಶಕ್ತಿಯನ್ನು ಬಳಸಿಕೊಂಡು ವ್ಯಕ್ತಿಗಳ ಜೀವನದ ಮೇಲೆ ಮತ್ತು ಜಗತ್ತಿನ ಆಗುಹೋಗುಗಳ ಮೇಲೆ ಸಕಾರಾತ್ಮಕವಾಗಿ ಪ್ರಭಾವ ಬೀರಬೇಕೆಂದು ಅವರು ಕರೆ ನೀಡುತ್ತಾರೆ.

ಪರಿಣಾಮಕಾರಿ ಪ್ರಾರ್ಥನೆಯ ಹಿಂದಿರುವ ಯೋಗ ವಿಜ್ಞಾನ

ಪರಮಹಂಸ ಯೋಗಾನಂದರು ಬರೆದಿದ್ದಾರೆ:

“ಮಾನವನ ಮನಸ್ಸು, ಚಂಚಲತೆಯ ಗೊಂದಲಗಳಿಂದ ಮುಕ್ತವಾದಾಗ, ಸಂಕೀರ್ಣ ರೇಡಿಯೋ ಯಂತ್ರಗಳ ಎಲ್ಲಾ ಕಾರ್ಯಗಳನ್ನು ನಿರ್ವಹಿಸಲು — ಆಲೋಚನೆಗಳನ್ನು ಕಳುಹಿಸಲು ಮತ್ತು ಸ್ವೀಕರಿಸಲು ಹಾಗೂ ಅನಗತ್ಯವಾದವುಗಳನ್ನು ದೂರವಿರಿಸಲು ಶಕ್ತವಾಗುತ್ತದೆ. ರೇಡಿಯೋ ಪ್ರಸಾರ ಕೇಂದ್ರದ ಶಕ್ತಿಯು, ಅದು ಬಳಸಬಹುದಾದ ವಿದ್ಯುತ್ ಪ್ರವಾಹದ ಪ್ರಮಾಣದಿಂದ ಹೇಗೆ ನಿಯಂತ್ರಿಸಲ್ಪಡುತ್ತದೆಯೋ, ಹಾಗೆಯೇ ಮಾನವ ರೇಡಿಯೋದ ಪರಿಣಾಮಕಾರಿತ್ವವು ಪ್ರತಿಯೊಬ್ಬ ವ್ಯಕ್ತಿಯು ಹೊಂದಿರುವ ಇಚ್ಛಾಶಕ್ತಿಯ ಮಟ್ಟವನ್ನು ಅವಲಂಬಿಸಿರುತ್ತದೆ.”

ದೇವರ ಇಚ್ಛೆಯೊಂದಿಗೆ ತಮ್ಮ ಇಚ್ಛೆಯನ್ನು ಸಂಪೂರ್ಣವಾಗಿ ಸಮನ್ವಯಗೊಳಿಸಿದ ಪ್ರಬುದ್ಧ ಗುರುಗಳ ಮನಸ್ಸುಗಳು, ದೇಹ, ಮನಸ್ಸು ಮತ್ತು ಆತ್ಮದ ಉಪಶಮನಕಾರಿಯು ತಕ್ಷಣವೇ ಫಲಿಸುವಂತೆ ದೈವಿಕ ಶಕ್ತಿಯನ್ನು ಪ್ರಸಾರ ಮಾಡಬಲ್ಲವು. ಇಂತಹ ಗುಣಪಡಿಸುವಿಕೆಯ ಉದಾಹರಣೆಗಳನ್ನು ಪರಮಹಂಸ ಯೋಗಾನಂದರ ಬರಹಗಳು ಮತ್ತು ಉಪನ್ಯಾಸಗಳಲ್ಲಿ ಹೇರಳವಾಗಿ ಕಾಣಬಹುದು. ಅವು ಪವಾಡ ಸದೃಶವಾಗಿ ಕಂಡರೂ, ದೈವಿಕ ಗುಣಪಡಿಸುವಿಕೆಗಳು ಸೃಷ್ಟಿಯ ಸಾರ್ವತ್ರಿಕ ನಿಯಮಗಳನ್ನು ವೈಜ್ಞಾನಿಕವಾಗಿ ಪಾಲಿಸುವುದರ ನೈಸರ್ಗಿಕ ಫಲಿತಾಂಶವಾಗಿವೆ ಎಂದು ಅವರು ವಿವರಿಸಿದರು. ತಮ್ಮ ಪ್ರಬಲ ಇಚ್ಛಾಶಕ್ತಿ ಮತ್ತು ಚೈತನ್ಯವನ್ನು ಉಪಯೋಗಿಸಿ, ಇತರರ ದೇಹ ಮತ್ತು ಮನಸ್ಸುಗಳಲ್ಲಿ, ದೇವರ ಪರಿಪೂರ್ಣತೆಯ ಕಲ್ಪನೆಗಳನ್ನು ಉದಿಸುವಂತೆ ಮಾಡುವುದರ ಮೂಲಕ, ಜ್ಞಾನೋದಯ ಪಡೆದ ಜ್ಞಾನಿಗಳು ಬ್ರಹ್ಮಾಂಡದಲ್ಲಿ ಎಲ್ಲವೂ ಹೇಗೆ ರೂಪುಗೊಂಡಿದೆಯೋ ಅದೇ ಪ್ರಕ್ರಿಯೆಯನ್ನು ಅನುಸರಿಸುತ್ತಾರೆ.

ಈ ತತ್ವಗಳಿಗನುಗುಣವಾಗಿ ಪ್ರಾರ್ಥಿಸುವ ಯಾವುದೇ ವ್ಯಕ್ತಿಯು, ಅವರ ಪ್ರಾರ್ಥನೆಗಳು ಸಹಾ ಸ್ಪಷ್ಟವಾದ ಪ್ರಭಾವ ಬೀರುವುದನ್ನು ಕಂಡುಕೊಳ್ಳುತ್ತಾರೆ. ಒಬ್ಬ ಗುರುವು ಪ್ರದಾನ ಮಾಡಬಹುದಾದ ಶಕ್ತಿಗಿಂತ ನಮ್ಮ ವೈಯಕ್ತಿಕ ಶಕ್ತಿಯು ಸ್ಪಷ್ಟವಾಗಿ ಕಡಿಮೆಯಿದ್ದರೂ, ಸಾವಿರಾರು ಜನರ ಪ್ರಾರ್ಥನೆಗಳು ಒಂದಾದಾಗ ಉತ್ಪತ್ತಿಯಾಗುವ ಶಾಂತಿ ಮತ್ತು ದೈವಿಕ ಉಪಶಮನಕಾರಿಯ ಪ್ರಬಲ ಕಂಪನಗಳು ಅಪೇಕ್ಷಿತ ಫಲಿತಾಂಶಗಳನ್ನು ಪ್ರಕಟಗೊಳಿಸಲು ಸಹಾಯ ಮಾಡುವಲ್ಲಿ ಅಪರಿಮಿತ ಮೌಲ್ಯವನ್ನು ಹೊಂದಿರುತ್ತವೆ. ಈ ಉದ್ದೇಶಕ್ಕಾಗಿ, ಪರಮಹಂಸ ಯೋಗಾನಂದರು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಸೇಷನ್ ಫೆಲೋಶಿಪ್ ಪ್ರಾರ್ಥನಾ ಪರಿಷತ್ತು ಮತ್ತು ಜಾಗತಿಕ ಪ್ರಾರ್ಥನಾ ಸಮೂಹವನ್ನು ಸ್ಥಾಪಿಸಿದರು.

ಇತರರಿಗಾಗಿ ಪರಿಣಾಮಕಾರಿಯಾಗಿ ಪ್ರಾರ್ಥಿಸಲು ಪರಮಹಂಸಜಿಯವರ ತಂತ್ರಗಳಲ್ಲಿ ಒಂದು ಇಲ್ಲಿದೆ:

ಈ ಕಷ್ಟಕರ ಸಮಯದಲ್ಲಿ, ಪ್ರಾರ್ಥನೆಯ ಬಲದ ಮೂಲಕ — ಕೇವಲ ನಮಗಾಗಿ ಮಾತ್ರವಲ್ಲದೆ, ನಮ್ಮ ಕುಟುಂಬಗಳು, ನಮ್ಮ ಸ್ನೇಹಿತರು, ನಮ್ಮ ನೆರೆಹೊರೆಯವರು ಮತ್ತು ಇಡೀ ಜಗತ್ತಿಗೆ ಸೇವೆ ಸಲ್ಲಿಸಲು ನಾವು ಬಹಳಷ್ಟು ಕಾರ್ಯಗಳನ್ನು ಮಾಡಬಹುದು. ಯೋಗದಾ ಸತ್ಸಂಗ ಪಾಠಗಳಿಗೆ ಸೇರಿಕೊಳ್ಳುವ ಮೂಲಕ ಪರಮಹಂಸ ಯೋಗಾನಂದರು ಬೋಧಿಸಿದ ಪರಿಣಾಮಕಾರಿ ಪ್ರಾರ್ಥನಾ ತಂತ್ರಗಳನ್ನು ನೀವು ಕಲಿಯಬಹುದು ಮತ್ತು ದೇವರೊಂದಿಗೆ ನಿಮ್ಮದೇ ಆದ ವೈಯಕ್ತಿಕ ಸಂಬಂಧವನ್ನು ಬೆಳೆಸಿಕೊಳ್ಳಬಹುದು.

ವೈಎಸ್‌ಎಸ್‌ ಪಾಠಗಳಲ್ಲಿ, ಪರಮಹಂಸ ಯೋಗಾನಂದರು (ವೈಎಸ್‌ಎಸ್‌/ಎಸ್‌ಆರ್‌ಎಫ್‌ನ ಉಪಶಮನಕಾರಿ ತಂತ್ರದ ಜೊತೆಗೆ) ಈ ಕೆಳಗಿನ ತಂತ್ರವನ್ನು ನೀಡುತ್ತಾರೆ:

Paramahansa Yogananda with a man on a wheelchair.“ಮೊದಲು, ನಿಮ್ಮ ಹುಬ್ಬುಗಳನ್ನು ಸ್ವಲ್ಪ ಸಂಕುಚಿಸಿ, ನಂತರ ನಿಮ್ಮ ಕಣ್ಣುಗಳನ್ನು ಮುಚ್ಚಿ. ನೀವು ಯಾರಿಗೆ ಉಪಶಮನಕಾರಿ ಶಕ್ತಿಯನ್ನು ಕಳುಹಿಸಲು ಬಯಸುತ್ತೀರೋ ಆ ವ್ಯಕ್ತಿಯನ್ನು ನೆನಪಿಸಿಕೊಳ್ಳಿ.

“ನಿಮ್ಮ ಹುಬ್ಬುಗಳ ಮಧ್ಯದ ಬಿಂದುವಿನಲ್ಲಿ ಏಕಾಗ್ರಗೊಳಿಸಿ ಮತ್ತು ಮನಸ್ಸಿನಲ್ಲಿಯೇ ಹೀಗೆ ಹೇಳಿಕೊಳ್ಳಿ: ‘ದಿವ್ಯ ತಂದೆಯೇ, ನಿನ್ನ ಇಚ್ಛೆಯೊಂದಿಗೆ ನಾನು ಸಂಕಲ್ಪಿಸುತ್ತೇನೆ. ನನ್ನ ಇಚ್ಛೆಯೇ ನಿನ್ನ ಇಚ್ಛೆಯಾಗಿದೆ. ಓ ತಂದೆಯೇ, ನಿನ್ನ ಸರ್ವವ್ಯಾಪಿ ಇಚ್ಛೆಯೊಂದಿಗೆ, ನಾನು ಹೃದಯಪೂರ್ವಕವಾಗಿ, ನನ್ನ ಸಂಪೂರ್ಣ ಆತ್ಮದಿಂದ, ಈ ವ್ಯಕ್ತಿಯು ಗುಣಮುಖನಾಗಲಿ ಎಂದು ಸಂಕಲ್ಪಿಸುತ್ತೇನೆ.’

“ಇದನ್ನು ಹೇಳುತ್ತಿರುವಾಗ, ನಿಮ್ಮ ಹುಬ್ಬುಗಳ ನಡುವಿನ ಬಿಂದುವಿನಿಂದ (ಭ್ರೂಮಧ್ಯದಿಂದ) ಒಂದು ಶಕ್ತಿ ಪ್ರವಾಹವು, ನೀವು ಸಹಾಯ ಮಾಡಲು ಪ್ರಯತ್ನಿಸುತ್ತಿರುವ ವ್ಯಕ್ತಿಯ ಹುಬ್ಬುಗಳ ನಡುವಿನ ಬಿಂದುವಿಗೆ (ಭ್ರೂಮಧ್ಯಕ್ಕೆ) ಸಾಗುತ್ತಿದೆ ಎಂದು ಭಾವಿಸಿ. ನಿಮ್ಮ ಆಧ್ಯಾತ್ಮಿಕ ಚಕ್ಷುವಿನಿಂದ, ನೀವು ಗುಣಮುಖವಾಗಬೇಕೆಂದು ಬಯಸುವ ವ್ಯಕ್ತಿಯ ಆಧ್ಯಾತ್ಮಿಕ ಚಕ್ಷುವಿಗೆ, ಒಂದು ಶಕ್ತಿ ಪ್ರವಾಹವನ್ನು ಕಳುಹಿಸುತ್ತಿದ್ದೀರಿ ಎಂದು ಭಾವಿಸಿ ಮತ್ತು ಅನುಭವಿಸಿ.”

ಆಳವಾದ ಏಕಾಗ್ರತೆಯೊಂದಿಗೆ ಮಾಡಿದಾಗ ನೀವು ಭ್ರೂಮಧ್ಯದಲ್ಲಿ ಉಷ್ಣತೆಯನ್ನು ಅನುಭವಿಸುವಿರಿ. ಈ ಉಷ್ಣತೆಯ ಅನುಭವವು ನಿಮ್ಮ ಸಂಕಲ್ಪ ಶಕ್ತಿಯು ವೃದ್ಧಿಸುತ್ತಿದೆ ಎಂಬುದಕ್ಕೆ ಪುರಾವೆಯಾಗಿದೆ.

“ಇನ್ನೂ ಆಳವಾಗಿ ಏಕಾಗ್ರತೆ ವಹಿಸಿ. ಮಾನಸಿಕವಾಗಿ ಹೇಳಿ: ‘ನಿಮ್ಮ ಸಂಕಲ್ಪದಿಂದ ನಾನು ಬ್ರಹ್ಮಾಂಡ ಶಕ್ತಿಯ ಒಂದು ಕಿರಣವನ್ನು ಕಳುಹಿಸುತ್ತೇನೆ. ತಂದೆಯೇ, ಅದು ಅಲ್ಲಿದೆ.

“ಇದನ್ನು 15 ರಿಂದ 20 ನಿಮಿಷಗಳ ಕಾಲ ಅಭ್ಯಾಸ ಮಾಡಬೇಕು. ನೀವು ಇದನ್ನು ಮಾಡುತ್ತಿರುವಾಗ, ನಿಮ್ಮ ಸಂಕಲ್ಪ ಶಕ್ತಿ ವೃದ್ಧಿಸುತ್ತದೆ; ಮತ್ತು ಈ ವೃದ್ಧಿಸಿದ ಸಂಕಲ್ಪ ಶಕ್ತಿಯು ಸದಾ, ಏನೇ ಸಂಭವಿಸಿದರೂ, ಅಗತ್ಯವಿದ್ದಾಗ ನಿಮಗೂ ಮತ್ತು ಇತರರಿಗೂ ಸಹಾಯ ಮಾಡಲು ನಿರಂತರವಾಗಿ ನಿಮ್ಮೊಂದಿಗಿರುತ್ತದೆ.”

ನಾವು ಪ್ರಾರ್ಥನೆಯ ಮೂಲಕ ದೇವರ ಶಕ್ತಿಯನ್ನು ಪ್ರಕಟಪಡಿಸಬಹುದು

Daya Mata: Third president of YSS/SRF.ಕೆಲವೊಮ್ಮೆ ಜನರು, “ಇತರರಿಗಾಗಿ ಪ್ರಾರ್ಥಿಸಲು ಇರುವ ಅತ್ಯುತ್ತಮ ವಿಧಾನ ಯಾವುದು?” ಎಂದು ಕೇಳುತ್ತಾರೆ. ಶ್ರೀ ಶ್ರೀ ದಯಾ ಮಾತಾ ಅವರು ಹೇಳಿದ್ದಾರೆ:

“ಇತರರಿಗಾಗಿ ಪ್ರಾರ್ಥಿಸುವುದು ಸರಿಯಾದದ್ದು ಮತ್ತು ಉತ್ತಮವಾದದ್ದು… ಎಲ್ಲಕ್ಕಿಂತ ಹೆಚ್ಚಾಗಿ, ಅವರು ದೇವರಿಗೆ ಗ್ರಹಣಶೀಲರಾಗಲಿ ಮತ್ತು ಹೀಗಾಗಿ ದೈವಿಕ ವೈದ್ಯರಿಂದಲೇ ನೇರವಾಗಿ ಶಾರೀರಿಕ, ಮಾನಸಿಕ ಅಥವಾ ಆಧ್ಯಾತ್ಮಿಕ ನೆರವನ್ನು ಪಡೆಯಲಿ ಎಂದು ಕೇಳುವುದು. ಇದು ಎಲ್ಲಾ ಪ್ರಾರ್ಥನೆಗಳಿಗೆ ಆಧಾರವಾಗಿದೆ. ದೇವರ ಆಶೀರ್ವಾದ ಸದಾ ಇರುತ್ತದೆ; ಆದರೆ ಅನೇಕ ವೇಳೆ ಗ್ರಹಣಶೀಲತೆಯ ಕೊರತೆಯಾಗಿರುತ್ತದೆ. ಪ್ರಾರ್ಥನೆಯು ಗ್ರಹಣಶೀಲತೆಯನ್ನು ಹೆಚ್ಚಿಸುತ್ತ….

“ನೀವು ಇತರರಿಗೆ ಅಥವಾ ನಿಮಗಾಗಿ ಉಪಶಮನಕಾರಿಯನ್ನು ದೃಢೀಕರಿಸುವಾಗ, ದೇವರ ಉಪಶಮನಕಾರಿ ಶಕ್ತಿಯ ಅಗಾಧ ಪ್ರವಾಹವು, ನಿಮ್ಮನ್ನು ಅಥವಾ ನೀವು ಪ್ರಾರ್ಥಿಸುತ್ತಿರುವ ವ್ಯಕ್ತಿಯನ್ನು ಬಿಳಿಯ ಪ್ರಭೆಯಾಗಿ ಆವರಿಸಿರುವಂತೆ ದೃಶ್ಯೀಕರಿಸಿಕೊಳ್ಳಿ. ಅದು ಎಲ್ಲಾ ರೋಗ ಮತ್ತು ಅಪೂರ್ಣತೆಗಳನ್ನು ಕರಗಿಸಿ ನಿವಾರಿಸುತ್ತಿದೆ ಎಂದು ಭಾವಿಸಿ. ನಾವು ಚಿಂತಿಸುವ ಪ್ರತಿಯೊಂದು ಉನ್ನತ ಚಿಂತನೆ, ನಾವು ಉಚ್ಚರಿಸುವ ಪ್ರತಿಯೊಂದು ಪ್ರಾರ್ಥನೆ, ನಾವು ಮಾಡುವ ಪ್ರತಿಯೊಂದು ಒಳ್ಳೆಯ ಕಾರ್ಯವು ದೇವರ ಶಕ್ತಿಯಿಂದ ತುಂಬಿರುತ್ತದೆ. ನಮ್ಮ ನಂಬಿಕೆಯು ಪ್ರಬಲವಾಗುತ್ತಾ ಮತ್ತು ದೇವರ ಮೇಲಿನ ನಮ್ಮ ಪ್ರೀತಿ ಆಳವಾಗುತ್ತಾ ಹೋದಂತೆ, ನಾವು ಈ ಶಕ್ತಿಯನ್ನು ಹೆಚ್ಚು ಹೆಚ್ಚು ಪ್ರಮಾಣದಲ್ಲಿ ಪ್ರಕಟಿಸಬಹುದು.”

“ಆಲೋಚನೆಯು ಒಂದು ಶಕ್ತಿ; ಅದು ಅಪಾರ ಶಕ್ತಿಯನ್ನು ಹೊಂದಿದೆ. ಅದಕ್ಕಾಗಿಯೇ ಪರಮಹಂಸ ಯೋಗಾನಂದರು ಪ್ರಾರಂಭಿಸಿದ ಜಾಗತಿಕ ಪ್ರಾರ್ಥನಾ ಸಮೂಹವನ್ನು ನಾನು ಅತಿ ಆಳವಾಗಿ ನಂಬುತ್ತೇನೆ. ನೀವೆಲ್ಲರೂ ಅದರಲ್ಲಿ ತೊಡಗಿಸಿಕೊಂಡಿದ್ದೀರಿ ಎಂದು ನಾನು ಆಶಿಸುತ್ತೇನೆ. ಜನರು ಜಾಗತಿಕ ಪ್ರಾರ್ಥನಾ ಸಮೂಹದಿಂದ ಬಳಸಲ್ಪಡುವ ಉಪಶಮನಕಾರಿ ತಂತ್ರದಲ್ಲಿರುವಂತೆ, ಶಾಂತಿ, ಪ್ರೀತಿ, ಸದ್ಭಾವನೆ ಮತ್ತು ಕ್ಷಮೆಗಳ ಕೇಂದ್ರೀಕೃತ, ಸಕಾರಾತ್ಮಕ ಆಲೋಚನೆಗಳನ್ನು ಹೊರಸೂಸಿದಾಗ, ಇದು ಮಹಾ ಶಕ್ತಿಯನ್ನು ಉತ್ಪಾದಿಸುತ್ತದೆ. ಜನಸಾಮಾನ್ಯರು ಇದನ್ನು ಮಾಡಿದರೆ, ಇದು ಜಗತ್ತನ್ನೇ ಬದಲಾಯಿಸಲು ಬೇಕಾಗುವಷ್ಟು ಶಕ್ತಿಶಾಲಿಯಾದ ಒಳ್ಳೆಯತನದ ಕಂಪನವನ್ನು ಸೃಷ್ಟಿಸುತ್ತದೆ”

ಪ್ರಾರ್ಥನೆಯ ಮೂಲಕ ವಿಶ್ವ ಶಾಂತಿ ಮತ್ತು ಉಪಶಮನಕಾರಿಯನ್ನು ತರಲು ನೀವು ಹೇಗೆ ನೆರವಾಗಬಹುದು

ಇದನ್ನು ಹಂಚಿಕೊಳ್ಳಿ