ವೈಎಸ್ಎಸ್/ಎಸ್ ಆರ್ ಎಫ್ ನ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿ ಅವರು ತಮ್ಮ ಭಾರತ ಮತ್ತು ನೇಪಾಳ ಭೇಟಿಯನ್ನು ಪ್ರಾರಂಭಿಸಲು 2025 ರ ಜನವರಿ 28 ರಂದು ಬೆಂಗಳೂರಿಗೆ ಆಗಮಿಸಿದರು. ಅವರೊಂದಿಗೆ ಎಸ್ ಆರ್ ಎಫ್ ನ ಸ್ವಾಮಿ ಸರಳಾನಂದರವರು ಜೊತೆಯಾಗಿದ್ದರು.
ಸ್ವಾಮೀಜಿಯವರು ಭಾರತದ ನಾಲ್ಕು ಪ್ರಮುಖ ನಗರಗಳಾದ (ಬೆಂಗಳೂರು, ಚೆನ್ನೈ, ಅಹಮದಾಬಾದ್ ಮತ್ತು ನೋಯ್ಡಾ) ಮತ್ತು ನೇಪಾಳದ ಕಠ್ಮಂಡುವಿಗೆ ಭೇಟಿ ನೀಡಿದರು, ಅಲ್ಲಿ ಈ ಕೆಳಗೆ ನೀಡಿದಂತೆ ಒಂದು ದಿನದ ವಿಶೇಷ ಕಾರ್ಯಕ್ರಮಗಳನ್ನು ಆಯೋಜಿಸಲಾಗಿತ್ತು:
- ಭಾನುವಾರ, ಫೆಬ್ರವರಿ 2: ಬೆಂಗಳೂರು
- ಭಾನುವಾರ, ಫೆಬ್ರವರಿ 9: ಚೆನ್ನೈ
- ಭಾನುವಾರ, ಫೆಬ್ರವರಿ 23: ಅಹಮದಾಬಾದ್
- ಫೆಬ್ರವರಿ 27, ಗುರುವಾರ: ನೋಯ್ಡಾ
- ಮಾರ್ಚ್ 1, ಶನಿವಾರ: ಕಠ್ಮಂಡು
ಸ್ವಾಮೀಜಿಯವರ ಅಹಮದಾಬಾದ್ ಮತ್ತು ನೋಯ್ಡಾ ಪ್ರವಾಸಗಳ ಕಾರ್ಯಕ್ರಮಗಳನ್ನು ನೇರ ಪ್ರಸಾರ ಮಾಡಲಾಗಿತ್ತು ಮತ್ತು ಅದು ಇನ್ನೂ ವೀಕ್ಷಣೆಗೆ ಲಭ್ಯವಿದೆ ಎಂಬುದನ್ನು ಹಂಚಿಕೊಳ್ಳಲು ನಾವು ಸಂತೋಷಪಡುತ್ತೇವೆ. ಇನ್ನಷ್ಟು ತಿಳಿಯಲು ಮತ್ತು ವೀಕ್ಷಿಸಲು ದಯವಿಟ್ಟು ಕೆಳಗಿನ ಗುಂಡಿಯನ್ನು ಒತ್ತಿ.
ಹಲವಾರು ಪ್ರಮುಖ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು ಪ್ರಸಾರ ಮಾಡಿದ ಸ್ವಾಮಿ ಚಿದಾನಂದಜಿ ಅವರ ಭೇಟಿಯ ಮಾಧ್ಯಮ ಪ್ರಸಾರವನ್ನು ವೀಕ್ಷಿಸಲು ನಾವು ನಿಮ್ಮನ್ನು ಆಹ್ವಾನಿಸುತ್ತೇವೆ.
ಸ್ವಾಮೀಜಿಯವರ ಪ್ರವಾಸದ ಫೋಟೋಗಳನ್ನು ಆನಂದಿಸಲು ದಯವಿಟ್ಟು ಕೆಳಗಿನ ಚಿತ್ರಗಳ ಮೇಲೆ ಕ್ಲಿಕ್ ಮಾಡಿ.
ಬೆಂಗಳೂರು
ಜನವರಿ 31 ರಂದು, ನಮ್ಮ ಪ್ರೀತಿಯ ಅಧ್ಯಕ್ಷ ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾಗಿರುವ ಸ್ವಾಮಿ ಚಿದಾನಂದಜಿ ಅವರು ಬೆಂಗಳೂರಿನ ಯೋಗದಾ ಸತ್ಸಂಗ ಧ್ಯಾನ ಕೇಂದ್ರಕ್ಕೆ ಭೇಟಿ ನೀಡಿದರು, ಅಲ್ಲಿ ಅವರಿಗೆ ವೈಎಸ್ಎಸ್ ಭಕ್ತರಿಂದ ಆತ್ಮೀಯ ಸ್ವಾಗತ ದೊರೆಯಿತು.
ಮುಖ್ಯ ಧ್ಯಾನ ಮಂದಿರದ ಪೂಜಾಪೀಠದಲ್ಲಿ ಪುಷ್ಪ ನಮನ ಸಲ್ಲಿಸಿದ ನಂತರ ಸ್ವಾಮೀಜಿ ಭಕ್ತರನ್ನುದ್ದೇಶಿಸಿ ಮಾತನಾಡಿದರು. ದೀರ್ಘಕಾಲದ ಸ್ವಯಂಸೇವಕರು ಬೆಂಗಳೂರು ಕೇಂದ್ರದ ಚಟುವಟಿಕೆಗಳು ಮತ್ತು ಕಾರ್ಯಕ್ರಮಗಳ ಬಗ್ಗೆ ಸ್ವಾಮೀಜಿ ಮತ್ತು ಇತರರೊಂದಿಗೆ ವರದಿಯನ್ನು ಹಂಚಿಕೊಂಡರು.
ನಂತರ ಸ್ವಾಮೀಜಿಯವರು ಭಕ್ತರನ್ನು ಸಣ್ಣ ಗುಂಪುಗಳಲ್ಲಿ ಭೇಟಿಯಾಗಿ ಪ್ರಸಾದ ವಿತರಿಸಿ ಪ್ರತಿಯೊಬ್ಬರನ್ನು ಆಶೀರ್ವದಿಸಿದರು.
ಫೆಬ್ರವರಿ 2 ರಂದು, ಸ್ವಾಮಿ ಚಿದಾನಂದಜಿ ಅವರು ಶ್ರೀ ಶ್ರೀ ಪರಮಹಂಸ ಯೋಗಾನಂದರ ಕ್ರಿಯಾ ಯೋಗ ಬೋಧನೆಗಳಿಂದ ಜ್ಞಾನವನ್ನು ಹಂಚಿಕೊಳ್ಳಲು ದೈವಿಕ ಮೈತ್ರಿಯ (ಸತ್ಸಂಗ) ಮನೋಭಾವದಲ್ಲಿ 1,500 ಕ್ಕೂ ಹೆಚ್ಚು ಭಕ್ತರು ಮತ್ತು ಸ್ನೇಹಿತರನ್ನು ಭೇಟಿಯಾದರು. ಧ್ಯಾನವು ಆಂತರಿಕ ಪರಿವರ್ತನೆ ಮತ್ತು ಆಧ್ಯಾತ್ಮಿಕ ಬೆಳವಣಿಗೆಯ ಮಾರ್ಗವಾಗಿ ಹೇಗೆ ಕಾರ್ಯನಿರ್ವಹಿಸುತ್ತದೆ, ಉದ್ದೇಶ, ಶಾಂತಿ ಮತ್ತು ಸಂತೋಷದ ಜೀವನವನ್ನು ನಡೆಸಲು ನಮ್ಮನ್ನು ಹೇಗೆ ಸಶಕ್ತಗೊಳಿಸುತ್ತದೆ ಎಂಬುದರ ಕುರಿತು ಅವರು ಸ್ಪೂರ್ತಿದಾಯಕವಾಗಿ ಮಾತನಾಡಿದರು.
ಸ್ವಾಮಿ ಚಿದಾನಂದಜಿ ಅವರ ಸತ್ಸಂಗವು ಮೂರು ಗಂಟೆಗಳ ಸಾಮೂಹಿಕ ಧ್ಯಾನ ಮತ್ತು ಕೀರ್ತನೆಯ ಅವಧಿಯನ್ನು ಒಳಗೊಂಡ ಒಂದು ದಿನದ ಸಮಾರೋಪ ಕಾರ್ಯಕ್ರಮವಾಗಿತ್ತು.
ಚೆನ್ನೈ
ಸ್ವಾಮಿ ಚಿದಾನಂದಜಿ ಅವರು ಫೆಬ್ರವರಿ 08 ಶನಿವಾರದಂದು ಚೆನ್ನೈನ ಯೋಗದಾ ಸತ್ಸಂಗ ಧ್ಯಾನ ಕೇಂದ್ರಕ್ಕೆ ಆಗಮಿಸಿದ್ದರು, ಅಲ್ಲಿ ಅವರನ್ನು ಭಕ್ತರು ಸಂತೋಷದಿಂದ ಸ್ವಾಗತಿಸಿದರು. ಅವರು ಸ್ಪೂರ್ತಿದಾಯಕ ಭಾಷಣ ಮಾಡಿದರು, ನಂತರ ಪ್ರಸಾದ ವಿತರಣೆ ನಡೆಯಿತು.
ದಶಕಗಳಿಂದ ವೈಎಸ್ಎಸ್ ಭಕ್ತರಾಗಿರುವ ಮತ್ತು ಕ್ರಿಯಾ ಯೋಗ ಅಭ್ಯಾಸ ಮಾಡುತ್ತಿರುವ ಖ್ಯಾತ ಭಾರತೀಯ ನಟ ಮತ್ತು ಪದ್ಮ ವಿಭೂಷಣ ಪ್ರಶಸ್ತಿ ಪುರಸ್ಕೃತ ಶ್ರೀ ರಜನಿಕಾಂತ್ ಅವರನ್ನು ಸ್ವಾಮೀಜಿ ಭೇಟಿಯಾದರು. ಶ್ರೀ ರಜನಿಕಾಂತ್ ಅವರು ಸ್ವಾಮಿ ಚಿದಾನಂದಜಿ ಅವರನ್ನು ಭೇಟಿಯಾಗಲು ತುಂಬಾ ಉತ್ಸುಕರಾಗಿದ್ದರು. ತಮ್ಮ ಗುರುವಿನ ಮೇಲಿನ ಪರಸ್ಪರ ಭಕ್ತಿ ಮತ್ತು ಅವರ ಕ್ರಿಯಾ ಯೋಗದ ವಿಮೋಚನಾ ಮಾರ್ಗದ ಆಧಾರದ ಮೇಲೆ ಅವರು ಬಹಳ ಸ್ನೇಹಪರ ವಿಚಾರ ವಿನಿಮಯ ನಡೆಸಿದರು.
ಭಾರತ ಮತ್ತು ನೇಪಾಳ ಭೇಟಿಯ ಭಾಗವಾಗಿ, ಸ್ವಾಮೀಜಿಯವರು ಪರಮಹಂಸ ಯೋಗಾನಂದರ ಬೋಧನೆಗಳಿಂದ ಜ್ಞಾನವನ್ನು ಹಂಚಿಕೊಳ್ಳಲು ಫೆಬ್ರವರಿ 9 ರ ಭಾನುವಾರ ಚೆನ್ನೈನಲ್ಲಿ 1000 ಕ್ಕೂ ಹೆಚ್ಚು ಭಕ್ತರು ಮತ್ತು ಸ್ನೇಹಿತರನ್ನು ಭೇಟಿಯಾದರು. ದಿನವಿಡೀ ನಡೆದ ಈ ಕಾರ್ಯಕ್ರಮದಲ್ಲಿ ಸ್ವಾಮಿ ಚಿದಾನಂದಜಿ ಅವರ ನೇತೃತ್ವದಲ್ಲಿ ಮೂರು ಗಂಟೆಗಳ ಧ್ಯಾನ, ನಂತರ ಕೀರ್ತನೆ ಮತ್ತು ಪ್ರವಚನ ನಡೆಯಿತು.
ಪೂಜ್ಯ ಸ್ವಾಮೀಜಿಯವರ ಸತ್ಸಂಗದೊಂದಿಗೆ ಕಾರ್ಯಕ್ರಮವು ಕೊನೆಗೊಂಡಿತು, ಇದರಲ್ಲಿ ಧ್ಯಾನವು ಆಂತರಿಕ ಪರಿವರ್ತನೆ ಮತ್ತು ಆಧ್ಯಾತ್ಮಿಕ ಬೆಳವಣಿಗೆ ಮಾರ್ಗವಾಗಿ ಕಾರ್ಯನಿರ್ವಹಿಸುತ್ತದೆ, ಉದ್ದೇಶ, ಶಾಂತಿ ಮತ್ತು ಸಂತೋಷಯುತ ಜೀವನವನ್ನು ನಡೆಸಲು ನಮ್ಮನ್ನು ಹೇಗೆ ಸಶಕ್ತಗೊಳಿಸುತ್ತದೆ ಎಂಬುದರ ಕುರಿತು ಮಾತನಾಡಿದರು.
ರಾಂಚಿ
ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ/ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್ (ವೈಎಸ್ಎಸ್/ಎಸ್ಆರ್ಎಫ್)ನ ಅಧ್ಯಕ್ಷ ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಸ್ವಾಮಿ ಚಿದಾನಂದ ಗಿರಿಯವರು ಫೆಬ್ರವರಿ 10 ರ ಸಂಜೆ ರಾಂಚಿಯ ಯೋಗದಾ ಸತ್ಸಂಗ ಶಾಖಾ ಮಠಕ್ಕೆ ಆಗಮಿಸಿದರು. ವೈಎಸ್ಎಸ್ ಸನ್ಯಾಸಿಗಳು ಮತ್ತು ಭಕ್ತರು ಗುಲಾಬಿ ದಳಗಳು ಮತ್ತು ಪೂಜ್ಯ ಪ್ರಣಾಮಗಳೊಂದಿಗೆ ಅವರನ್ನು ಸ್ವಾಗತಿಸಿದರು. ಲಿಚ್ಚಿವೇದಿ, ಸ್ಮೃತಿ ಮಂದಿರ ಮತ್ತು ಯೋಗಾನಂದಜಿ ವಾಸಿಸುತ್ತಿದ್ದ ಕೋಣೆ ಸೇರಿದಂತೆ ಪರಮಹಂಸ ಯೋಗಾನಂದರ ಜೀವನಕ್ಕೆ ಸಂಬಂಧಿಸಿದ ಮಂದಿರಗಳಿಗೆ ಸ್ವಾಮೀಜಿ ತೆರಳಿದರು.
ಫೆಬ್ರವರಿ 16, ಭಾನುವಾರದಂದು ವೈಎಸ್ಎಸ್ ರಾಂಚಿ ಆಶ್ರಮದಲ್ಲಿ 800 ಕ್ಕೂ ಹೆಚ್ಚು ಭಕ್ತರು ಮತ್ತು ಸ್ನೇಹಿತರನ್ನು ಉದ್ದೇಶಿಸಿ ಸ್ವಾಮಿ ಚಿದಾನಂದಜಿಯವರು ಮಾತನಾಡಿದರು. ಇಂದಿನ ಜಗತ್ತಿನಲ್ಲಿ ಸಮತೋಲಿತ ಮತ್ತು ಯಶಸ್ವಿ ಜೀವನವನ್ನು ನಡೆಸಲು ನಮಗೆ ಸಹಾಯ ಮಾಡಲು ಯೋಗದಾ ಸತ್ಸಂಗ ಬೋಧನೆಗಳು ಹೇಗೆ ವಿಶಿಷ್ಟವಾಗಿ ಸೂಕ್ತವಾಗಿವೆ ಎಂಬುದರ ಬಗ್ಗೆ ಅವರು ಸ್ಪೂರ್ತಿದಾಯಕವಾಗಿ ಮಾತನಾಡಿದರು.
ಅಹಮದಾಬಾದ್
ರಾಂಚಿಯ ಯೋಗದಾ ಸತ್ಸಂಗ ಶಾಖಾ ಮಠದಲ್ಲಿ ಹತ್ತು ದಿನಗಳ ವಾಸ್ತವ್ಯದ ನಂತರ, ಸ್ವಾಮಿ ಚಿದಾನಂದಜಿಯವರು ಫೆಬ್ರವರಿ 21 ರ ಶುಕ್ರವಾರ ಅಹಮದಾಬಾದ್ ಗೆ ಒಂದು ದಿನದ ಕಾರ್ಯಕ್ರಮವನ್ನು ನಡೆಸಲು ಆಗಮಿಸಿದರು. ಫೆಬ್ರವರಿ 22 ರಂದು ಅವರು ಅಹಮದಾಬಾದ್ ನ ಧ್ಯಾನ ಕೇಂದ್ರಕ್ಕೆ ಭೇಟಿ ನೀಡಿ ಸ್ವಯಂಸೇವಕರು ಮತ್ತು ಭಕ್ತರೊಂದಿಗೆ ಸಂವಾದ ನಡೆಸಿದರು.
ಅವರು ಕೇಂದ್ರಕ್ಕೆ ಭೇಟಿ ನೀಡಿದ ಕೆಲವು ಫೋಟೋಗಳನ್ನು ನಾವು ಕೆಳಗೆ ಹಂಚಿಕೊಳ್ಳುತ್ತೇವೆ.
ಫೆಬ್ರವರಿ 23 ರಂದು, ಸ್ವಾಮಿ ಚಿದಾನಂದಜಿಯವರು ಅಹಮದಾಬಾದ್ ನಲ್ಲಿ ಸತ್ಸಂಗವನ್ನು ನೀಡಿದರು, ಅದರಲ್ಲಿ ಅವರು ಎಲ್ಲಾ ವೈಎಸ್ಎಸ್/ಎಸ್ಆರ್ಎಫ್ ಭಕ್ತರ ಪೂಜ್ಯ ಗುರು ಪರಮಹಂಸ ಯೋಗಾನಂದರ ಕ್ರಿಯಾ ಯೋಗ ಬೋಧನೆಗಳ ಬಗ್ಗೆ ಸ್ಪೂರ್ತಿದಾಯಕವಾಗಿ ಮಾತನಾಡಿದರು. ಮೂರು ಗಂಟೆಗಳ ಧ್ಯಾನ ಮತ್ತು ಕೀರ್ತನೆ ಅವಧಿಯನ್ನು ಒಳಗೊಂಡ ಒಂದು ದಿನದ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದ ಈ ಕಾರ್ಯಕ್ರಮದಲ್ಲಿ ಸುಮಾರು 1000 ಜನರು ಭಾಗವಹಿಸಿದ್ದರು.
ಧ್ಯಾನ ಎಂಬ ವಿಷಯದ ಬಗ್ಗೆ ತಮ್ಮ ಸತ್ಸಂಗದಲ್ಲಿ: ದೈವಿಕ ಆನಂದ ಮತ್ತು ಸಮೃದ್ಧಿಯ ಹಾದಿ ಎಂಬ ವಿಷಯದ ಕುರಿತು ತಮ್ಮ ಸತ್ಸಂಗದಲ್ಲಿ, ಧ್ಯಾನವು ನಮ್ಮನ್ನು ದೈವಿಕ ಅನುಗ್ರಹ ಮತ್ತು ಶಕ್ತಿಯ ಅನಂತ ಮೂಲದೊಂದಿಗೆ ಹೇಗೆ ಸಂಪರ್ಕಿಸುತ್ತದೆ – ಆಂತರಿಕ ಸಾಮರಸ್ಯ, ಶಕ್ತಿ ಮತ್ತು ಸುರಕ್ಷತೆಗೆ ಕಾರಣವಾಗುತ್ತದೆ ಎಂದು ಸ್ವಾಮೀಜಿ ವಿವರಿಸಿದರು. ಈ ದೈವಿಕ ಸಂಪರ್ಕವು ನಮ್ಮ ಆಂತರಿಕ ಜೀವನವನ್ನು ಪರಿವರ್ತಿಸುವುದಲ್ಲದೆ, ನಮ್ಮ ಬಾಹ್ಯ ಜೀವನದಲ್ಲಿ ಸಮತೋಲನ, ಸ್ಪಷ್ಟತೆ ಮತ್ತು ಸಮೃದ್ಧಿಯನ್ನು ತರುತ್ತದೆ.
ಮೂರು ಗಂಟೆಗಳ ಧ್ಯಾನ ಮತ್ತು ಸತ್ಸಂಗವನ್ನು ನೇರ ಪ್ರಸಾರ ಮಾಡಲಾಯಿತು ಮತ್ತು ಅದು ಇನ್ನೂ ಲಭ್ಯವಿರುತ್ತದೆ. ವೀಕ್ಷಿಸಲು ದಯವಿಟ್ಟು ಇಲ್ಲಿ ಒತ್ತಿ
ಅಹ್ಮದಾಬಾದ್ ನ ಕರ್ಣಾವತಿ ಕ್ಲಬ್ ನಲ್ಲಿ ನಡೆದ ಒಂದು ದಿನದ ಕಾರ್ಯಕ್ರಮದ ನಂತರ, ಫೆಬ್ರವರಿ 24 ರಂದು, ಸ್ವಾಮಿ ಚಿದಾನಂದಜಿ ಅಹಮದಾಬಾದ್ ನ ಸಾಬರಮತಿಯಲ್ಲಿರುವ ಮಹಾತ್ಮ ಗಾಂಧಿಯವರ ಆಶ್ರಮಕ್ಕೆ ಭೇಟಿ ನೀಡಿದರು.
1935 ರಲ್ಲಿ ಭಾರತಕ್ಕೆ ಮರಳಿದ ನಂತರ, ಪರಮಹಂಸ ಯೋಗಾನಂದರು ಗಾಂಧೀಜಿಯವರನ್ನು ಅವರ ವಾರ್ಧಾ ಆಶ್ರಮದಲ್ಲಿ ಭೇಟಿಯಾದರು ಮತ್ತು ಅವರಿಗೆ ಕ್ರಿಯಾ ಯೋಗದ ದೀಕ್ಷೆಯನ್ನು ನೀಡಿದರು. ಈ ಭೇಟಿಯ ವಿಸ್ತೃತ ವಿವರಣೆಯನ್ನು ಪರಮಹಂಸಜಿ ಅವರ ಯೋಗಿಯ ಆತ್ಮಕಥೆಯಲ್ಲಿ ದಾಖಲಿಸಲಾಗಿದೆ.
ಸ್ವಾಮೀಜಿಯವರು ಆಶ್ರಮಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ತೆಗೆದ ಕೆಲವು ಫೋಟೋಗಳನ್ನು ಕೆಳಗೆ ನೀಡಲಾಗಿದೆ.
ನೋಯ್ಡಾ
ನೋಯ್ಡಾದ ಯೋಗದಾ ಸತ್ಸಂಗ ಶಾಖಾ ಆಶ್ರಮಕ್ಕೆ ಭೇಟಿ
ಫೆಬ್ರವರಿ 27 ರಂದು ಸ್ವಾಮಿ ಚಿದಾನಂದಜಿ ಅವರು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾದ ನೋಯ್ಡಾ ಆಶ್ರಮದಲ್ಲಿ ಶ್ರೀ ಶ್ರೀ ಪರಮಹಂಸ ಯೋಗಾನಂದರ ಕ್ರಿಯಾ ಯೋಗ ಬೋಧನೆಗಳ ಬಗ್ಗೆ ಸತ್ಸಂಗ ನೀಡಿದರು. ಅವರು 1,500 ಕ್ಕೂ ಹೆಚ್ಚು ವೈಎಸ್ಎಸ್ ಭಕ್ತರು ಮತ್ತು ಸ್ನೇಹಿತರನ್ನೊಳಗೊಂಡ ಸಭಿಕರನ್ನುದ್ದೇಶಿಸಿ “ಧ್ಯಾನದ ಮೂಲಕ ನಮ್ಮ ದೈವಿಕ ಸಾಮರ್ಥ್ಯವನ್ನು ಜಾಗೃತಗೊಳಿಸುವುದು” ಎಂಬ ವಿಷಯದ ಬಗ್ಗೆ ಸ್ಪೂರ್ತಿದಾಯಕವಾಗಿ ಮಾತನಾಡಿದರು.
ಸ್ವಾಮೀಜಿ ತಮ್ಮ ಪ್ರವಚನದಲ್ಲಿ, ಹೇಗೆ ಧ್ಯಾನವನ್ನು ನಂಬಿಕೆ, ಸಮರ್ಪಣೆ ಮತ್ತು ಕ್ರಮಬದ್ಧತೆಯೊಂದಿಗೆ ಅಭ್ಯಾಸ ಮಾಡುವುದರಿಂದ ನಮ್ಮೊಳಗೆ ಅಡಗಿರುವ ಅನಂತ ಸಾಮರ್ಥ್ಯದ ಜಲಾಶಯವನ್ನು ಹೊರ ತರಲು ಸಹಾಯ ಮಾಡುತ್ತದೆ, ನಮ್ಮ ನಿಜವಾದ ವ್ಯಕ್ತಿತ್ವದ ಅತ್ಯುನ್ನತ ಅಭಿವ್ಯಕ್ತಿಯ ಕಡೆಗೆ ನಮ್ಮನ್ನು ಕರೆದೊಯ್ಯುತ್ತದೆ ಎಂದು ವಿವರಿಸಿದರು.
ಸತ್ಸಂಗವನ್ನು ನೇರ ಪ್ರಸಾರ ಮಾಡಲಾಯಿತು ಮತ್ತು ವೀಕ್ಷಣೆಗೆ ಇನ್ನೂ ಲಭ್ಯವಿರುತ್ತದೆ. ವೀಕ್ಷಿಸಲು ದಯವಿಟ್ಟು ಇಲ್ಲಿ ಒತ್ತಿ.
ನೇಪಾಳ
ಮಾರ್ಚ್ 1 ಬಹಳ ವಿಶೇಷ ದಿನವಾಗಿತ್ತು, ಏಕೆಂದರೆ ಸ್ವಾಮಿ ಚಿದಾನಂದ ಗಿರಿಯವರು ನೇಪಾಳದ ಕಠ್ಮಂಡುವಿನಲ್ಲಿ ಸ್ಪೂರ್ತಿದಾಯಕ ಕಾರ್ಯಕ್ರಮವನ್ನು ನಡೆಸಿದರು. ಈ ಸಂದರ್ಭವು 50 ವರ್ಷಗಳಲ್ಲಿ ಯೋಗದಾ ಸತ್ಸಂಗ ಸೊಸೈಟಿ/ಸೆಲ್ಫ್-ರಿಯಲೈಸೇಶನ್ ಫೆಲೋಶಿಪ್ (ವೈಎಸ್ಎಸ್/ಎಸ್ಆರ್ಎಫ್) ನ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರು ಅನೇಕ ವೈಎಸ್ಎಸ್ ಭಕ್ತರು ಮತ್ತು ಸ್ನೇಹಿತರಿಗೆ ನೆಲೆಯಾಗಿರುವ ಹಿಮಾಲಯನ್ ರಾಷ್ಟ್ರಕ್ಕೆ ನೀಡಿದ ಮೊದಲ ಭೇಟಿಯೆಂದು ಕೀರ್ತಿಗಳಿಸಿದೆ.
ಮೊದಲಿಗೆ ಸಮೂಹ ಧ್ಯಾನ, ನಂತರ ವೈಎಸ್ಎಸ್/ಎಸ್ಆರ್ ಎಫ್ ನ ಪ್ರೀತಿಯ ಸಂಸ್ಥಾಪಕರು ಮತ್ತು ಗುರುಗಳಾದ ಶ್ರೀ ಶ್ರೀ ಪರಮಹಂಸ ಯೋಗಾನಂದರ ಕ್ರಿಯಾ ಯೋಗ ಬೋಧನೆಗಳ ಬಗ್ಗೆ ಸ್ವಾಮಿ ಚಿದಾನಂದಜಿ ಅವರ ಸ್ಪೂರ್ತಿದಾಯಕ ಭಾಷಣದೊಂದಿಗೆ ಕಾರ್ಯಕ್ರಮ ಪ್ರಾರಂಭವಾಯಿತು. ಭಾಗವಹಿಸಿದ ನೂರಾರು ಜನರಲ್ಲಿ ವಿಶ್ವದ ಇತರ ಭಾಗಗಳಿಂದ ಭೇಟಿ ನೀಡಿದ ಹಲವಾರು ಎಸ್ಆರ್ ಎಫ್ ಭಕ್ತರು ಇದ್ದರು.
ವೈಎಸ್ಎಸ್/ಎಸ್ಆರ್ಎಫ್ ನ ಅಧ್ಯಕ್ಷರಾದ ಸ್ವಾಮಿ ಚಿದಾನಂದ ಗಿರಿಯವರು ಭಾರತ ಮತ್ತು ನೇಪಾಳದ ಭೇಟಿಯನ್ನು ಮುಕ್ತಾಯಗೊಳಿಸಿದರು
ಮಾರ್ಚ್ 6 ರಂದು, ಸ್ವಾಮಿ ಚಿದಾನಂದಜಿ ಅವರು ಪರಮಹಂಸ ಯೋಗಾನಂದರ ಪ್ರೀತಿಯ ತಾಯ್ನಾಡಿಗೆ ತಮ್ಮ ಇತ್ತೀಚಿಗಿನ ಭೇಟಿಯನ್ನು ಮುಕ್ತಾಯಗೊಳಿಸಿದರು. ಅವರು ನೋಯ್ಡಾದ ಯೋಗದಾ ಸತ್ಸಂಗ ಶಾಖಾ ಆಶ್ರಮದಿಂದ ಹೊರಟರು, ಅಲ್ಲಿ ವೈಎಸ್ಎಸ್ ಸನ್ಯಾಸಿಗಳು ಮತ್ತು ಭಕ್ತರಿಂದ ಹೃತ್ಪೂರ್ವಕ ಬೀಳ್ಕೊಡುಗೆಯ ಸಂದರ್ಭದಲ್ಲಿ ಅವರಿಗೆ ಗುಲಾಬಿ ದಳಗಳ ವೃಷ್ಟಿಯನ್ನು ಮಾಡಲಾಯಿತು.
ಭಾರತದಾದ್ಯಂತ ತಮ್ಮ ಕೊನೆಯ ಆರು ವಾರಗಳ ಪ್ರವಾಸ ಮತ್ತು ನೇಪಾಳದ ಕಠ್ಮಂಡುವಿಗೆ ಹೆಚ್ಚುವರಿ ಭೇಟಿಯಲ್ಲಿ, ಸ್ವಾಮಿ ಚಿದಾನಂದಜಿಯವರು ವೈಎಸ್ಎಸ್ ಆಶ್ರಮಗಳು ಮತ್ತು ಕೇಂದ್ರಗಳಲ್ಲಿ ಸಾವಿರಾರು ವೈಎಸ್ಎಸ್ ಭಕ್ತರು ಮತ್ತು ಸ್ನೇಹಿತರನ್ನು ಭೇಟಿಯಾದರು ಮತ್ತು ಹಲವಾರು ನಗರಗಳಲ್ಲಿ ಯೋಗಾನಂದಜಿ ಅವರ ಕ್ರಿಯಾ ಯೋಗ ಬೋಧನೆಗಳ ಬಗ್ಗೆ ಸಾರ್ವಜನಿಕ ಕಾರ್ಯಕ್ರಮಗಳನ್ನು ನಡೆಸಿದರು. ಕಾರ್ಯಕ್ರಮಗಳು ಸ್ಪೂರ್ತಿದಾಯಕ ಭಾಷಣಗಳ ಜೊತೆಗೆ, ಮಾರ್ಗದರ್ಶಿ ಧ್ಯಾನಗಳನ್ನು ಒಳಗೊಂಡಿದ್ದವು, ಇದರಲ್ಲಿ ಸ್ವಾಮೀಜಿ ಸಾವಿರಾರು ವೈಎಸ್ಎಸ್ ಮತ್ತು ಎಸ್ಆರ್ಎಫ್ ನ ಭಕ್ತರನ್ನು (ವೈಯಕ್ತಿಕವಾಗಿ ಮತ್ತು ನೇರ ಪ್ರಸಾರದ ಮೂಲಕ) ದೈವಿಕ ಶಾಂತಿ ಮತ್ತು ಸಂತೋಷದ ಆಳವಾದ ಅನುಭವಕ್ಕೆ ಕರೆದೊಯ್ದರು.


