ವೈಎಸ್ಎಸ್ ವತಿಯಿಂದ ಸುಂದರವಾದ ಹಿಮಾಲಯದ ಆವರಣದಲ್ಲಿ ಬೇಸಿಗೆ ಶಿಬಿರಗಳ
ಆಯೋಜನೆ (ಮಕ್ಕಳು ಮತ್ತು ಹದಿಹರೆಯದವರಿಗಾಗಿ, ಮೇ 31 – ಜೂನ್ 6, 2026)

10 ಜುಲೈ, 2026
ಸ್ವಾಮಿ ಲಲಿತಾನಂದರು ಮಂಗಳ ದೀಪವನ್ನು ಬೆಳಗಿಸುವ ಮೂಲಕ ಶೂಲಿನಿ ವಿಶ್ವವಿದ್ಯಾಲಯದಲ್ಲಿ ವೈಎಸ್ಎಸ್ ಬೇಸಿಗೆ ಶಿಬಿರವನ್ನು ಔಪಚಾರಿಕವಾಗಿ ಉದ್ಘಾಟಿಸಿದರು. ಅವರೊಂದಿಗೆ
ಸ್ವಾಮಿ ನಿರ್ಮಲಾನಂದರು, ಶೂಲಿನಿ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪ್ರೊ. ಪ್ರೇಮ್ ಕುಮಾರ್ ಖೋಸ್ಲಾ ಮತ್ತು ಶ್ರೀಮತಿ ಸರೋಜ ಖೋಸ್ಲಾ, ಹಾಗೂ ಕುಲಪತಿಗಳಾದ ಡಾ. ಅತುಲ್ ಖೋಸ್ಲಾ ಅವರು ಉಪಸ್ಥಿತರಿರುವುದನ್ನು ಕಾಣಬಹುದು.

ಸಮಗ್ರ ಭಾರತದ ಯುವಜನತೆಯನ್ನು ತಲುಪುವಲ್ಲಿ ಒಂದು ಹೊಸ ಅಧ್ಯಾಯ

ವೈಎಸ್ಎಸ್ ಯುವ ಸೇವೆಗಳು, ಮೇ 31ರಿಂದ ಜೂನ್ 6, 2026ರವರೆಗೆ ಹಿಮಾಚಲ ಪ್ರದೇಶದ ಸೋಲನ್‌ನಲ್ಲಿರುವ ಶೂಲಿನಿ ವಿಶ್ವವಿದ್ಯಾಲಯದಲ್ಲಿ ಮಕ್ಕಳು ಮತ್ತು ಹದಿಹರೆಯದವರಿಗಾಗಿ ಇದುವರೆಗಿನ ಅತಿ ದೊಡ್ಡ ಸಪ್ತಾಹ ಬೇಸಿಗೆ ಶಿಬಿರಗಳನ್ನು ಆಯೋಜಿಸಿತು. ದೇಶದ ಎಲ್ಲ ಭಾಗಗಳಿಂದ 11ರಿಂದ 17 ವರ್ಷ ವಯಸ್ಸಿನ 100ಕ್ಕೂ ಹೆಚ್ಚು ಬಾಲಕರು ಮತ್ತು 100ಕ್ಕೂ ಹೆಚ್ಚು ಬಾಲಕಿಯರು ಅವರಿಗಾಗಿ ಪ್ರತ್ಯೇಕವಾಗಿ ಆಯೋಜಿಸಲಾಗಿದ್ದ ಎರಡು ಶಿಬಿರಗಳಲ್ಲಿ ಭಾಗವಹಿಸಿದರು.

ಮೂರು ವಿಭಿನ್ನ ವಯೋಮಾನದವರ — ಕಿರಿಯರು (11–13), ಮಧ್ಯ ಹದಿಹರೆಯದವರು (14–15) ಮತ್ತು ಹಿರಿಯರು (16–17) — ವಿಶಿಷ್ಟ ಅಗತ್ಯಗಳನ್ನು ಪೂರೈಸುವ ರೀತಿಯಲ್ಲಿ ಈ ಶಿಬಿರಗಳನ್ನು ವಿನ್ಯಾಸಗೊಳಿಸಲಾಗಿತ್ತು. ಹೆಚ್ಚುವರಿಯಾಗಿ, 18–23 ವಯೋಮಾನದ ಯುವ ಸಾಧಕರನ್ನು ಸಹಾಯಕ ತಂಡದ ನಾಯಕರಾಗಿ ಸೇರ್ಪಡೆಗೊಳಿಸಲಾಯಿತು. ಇದರಿಂದ ಅವರು ಭವಿಷ್ಯದಲ್ಲಿ ಹೆಚ್ಚಿನ ಜವಾಬ್ದಾರಿಯುಳ್ಳ ಸೇವಾ ಸ್ಥಾನಗಳನ್ನು ವಹಿಸಿಕೊಳ್ಳುವಂತೆ ಬೆಳೆಯಲು ಸಾಧ್ಯವಾಗುತ್ತದೆ.

ಗುರುದೇವ ಶ್ರೀ ಶ್ರೀ ಪರಮಹಂಸ ಯೋಗಾನಂದರ “ಹೇಗೆ ಬದುಕುವುದು” ಬೋಧನೆಗಳ ಆಧಾರದ ಮೇಲೆ, ಈ ಶಿಬಿರವು ದೇಹ, ಮನಸ್ಸು ಮತ್ತು ಆತ್ಮದ ಸಮತೋಲಿತ ಬೆಳವಣಿಗೆಯನ್ನು ಉತ್ತೇಜಿಸಿತು. ಬೆಳಿಗ್ಗೆ ಮತ್ತು ಸಂಜೆ ಸಾಮೂಹಿಕವಾಗಿ ಚೈತನ್ಯದಾಯಕ ವ್ಯಾಯಾಮಗಳು ಹಾಗೂ ಧ್ಯಾನವನ್ನು ಮಾಡುವ ಅಭ್ಯಾಸಕ್ಕೆ ಒತ್ತು ನೀಡುವುದರೊಂದಿಗೆ, ಆಧ್ಯಾತ್ಮಿಕ ದಿನಚರಿ ಮತ್ತು ಶಿಸ್ತು ಈ ಶಿಬಿರದ ಪ್ರಮುಖ ಲಕ್ಷಣಗಳಾಗಿದ್ದವು.

ವೈಎಸ್ಎಸ್ ಸನ್ಯಾಸಿಗಳು ಮತ್ತು ಅನುಭವಿ ಬೋಧಕರಿಂದ ನಿರ್ಭಯತೆ, ಏಕಾಗ್ರತೆ, ಇಚ್ಛಾಶಕ್ತಿ, ಸ್ನೇಹ ಮತ್ತು ಅಂತಃಪ್ರಜ್ಞೆಯಂತಹ ಪ್ರಾಯೋಗಿಕ ವಿಷಯಗಳ ಕುರಿತು ನಡೆಸಲ್ಪಟ್ಟ ಹೇಗೆ ಬದುಕುವುದು’ ತರಗತಿಗಳು, ವಯಸ್ಸಿಗೆ ತಕ್ಕ ಸಮೂಹ ಚರ್ಚೆಗಳೊಂದಿಗೆ ಸೇರಿಕೊಂಡು, ಹದಿಹರೆಯದವರಿಗೆ ಜೀವನದ ಪ್ರಮುಖ ತತ್ವಗಳನ್ನು ಗ್ರಹಿಸಲು ಸಹಾಯ ಮಾಡಿದವು. ಈ ತರಗತಿಗಳು ವೈಎಸ್ಎಸ್ ಧ್ಯಾನ ತಂತ್ರಗಳ ಕುರಿತು ಸನ್ಯಾಸಿಗಳ ನೇತೃತ್ವದ ಮಾರ್ಗದರ್ಶನದಲ್ಲಿ ಮುಕ್ತಾಯಗೊಂಡವು. ಇದರಲ್ಲಿ ಅರ್ಹ ಶಿಬಿರಾರ್ಥಿಗಳು ಬ್ರಹ್ಮಾಂಡದ ಶಕ್ತಿಯಿಂದ ದೇಹವನ್ನು ಚೈತನ್ಯದಾಯಕಗೊಳಿಸುವ ಕಲೆ, ಹಾಂಗ್-ಸಾ ತಂತ್ರದ ಮೂಲಕ ಮನಸ್ಸನ್ನು ಏಕಾಗ್ರಗೊಳಿಸುವುದು ಮತ್ತು ಧ್ಯಾನದ ಓಂ ತಂತ್ರದ ಮೂಲಕ ದೇವರೊಂದಿಗೆ ಒಂದಾಗುವುದನ್ನು ಕಲಿತರು.

ಪೋಷಕರ ಅನಿಸಿಕೆಗಳು

ಶೂಲಿನಿ ವಿಶ್ವವಿದ್ಯಾನಿಲಯದಲ್ಲಿ ನಡೆದ ಬೇಸಿಗೆ ಶಿಬಿರದಿಂದ ತಮ್ಮ ಮಕ್ಕಳು ಹೇಗೆ ಪರಿವರ್ತನೆಗೊಂಡರು ಎಂಬುದರ ಕುರಿತು ಕೃತಜ್ಞರಾದ ಪೋಷಕರು ವೈಎಸ್ಎಸ್ ಸಂಸ್ಥೆಗೆ ಹಲವಾರು ಸಂದೇಶಗಳನ್ನು ಕಳುಹಿಸಿದ್ದಾರೆ. ಅವುಗಳಲ್ಲಿ ಕೆಲವು ಇಲ್ಲಿವೆ:

ಶಿಬಿರಗಳ ವೀಡಿಯೊ ಮುಖ್ಯಾಂಶಗಳು

ಒಂದು ಭವ್ಯವಾದ ಪ್ರಾಕೃತಿಕ ಹಿನ್ನೆಲೆ

ಶಿವಾಲಿಕ್ ಶ್ರೇಣಿಯ ಹಿಮಾಲಯದ ತಪ್ಪಲಿನಿಂದ ಸುತ್ತುವರಿದಿರುವ ಶೂಲಿನಿ ವಿಶ್ವವಿದ್ಯಾಲಯವು, ಚಿತ್ರಸದೃಶವಾದ ನಡಿಗೆ ಹಾದಿಗಳು ಮತ್ತು ಪೈನ್ ಮರಗಳ ಕಾಡುಗಳಿಂದ ಕೂಡಿದ 25 ಎಕರೆಗಳ ವಿಶಾಲವಾದ ಆವರಣವನ್ನು ಹೊಂದಿದೆ. ಈ ಆವರಣವು ಸುಂದರವಾದ ನೋಟಗಳು, ತಂಪಾದ ಹವಾಮಾನ ಮತ್ತು ಶಾಂತಿಯ ವಾತಾವರಣವನ್ನು ನೀಡುತ್ತದೆ. ಈ ಸ್ಫೂರ್ತಿದಾಯಕ ನೈಸರ್ಗಿಕ ಪರಿಸರವು ಶಿಬಿರಾರ್ಥಿಗಳ ಅನುಭವದ ಅವಿಭಾಜ್ಯ ಭಾಗವಾಯಿತು; ಇದು ಸಂತೋಷದಿಂದ ಕೂಡಿದ ಕಲಿಕೆಗೆ ಹಾಗೂ ಪ್ರಕೃತಿಯಲ್ಲಿ ದೇವರ ಉಪಸ್ಥಿತಿಯ ಬಗ್ಗೆ ಇನ್ನಷ್ಟು ಆಳವಾದ ಮೆಚ್ಚುಗೆಯನ್ನು ಬೆಳೆಸಲು ಸಹಕಾರಿಯಾಯಿತು.

ಬಾಲಕರು ಮತ್ತು ಬಾಲಕಿಯರಿಗಾಗಿ ಎರಡು ಪ್ರತ್ಯೇಕ ಶಿಬಿರಗಳು

ಬಾಲಕರ ಶಿಬಿರ

ವೈಎಸ್ಎಸ್ / ಎಸ್‌ಆರ್‌ಎಫ್ ಅಧ್ಯಕ್ಷರ ಸಂದೇಶ

ವೈಎಸ್ಎಸ್/ಎಸ್‌ಆರ್‌ಎಫ್ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿಯವರ ಸ್ಫೂರ್ತಿದಾಯಕ ಸಂದೇಶದೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಹಿರಿಯ ವೈಎಸ್ಎಸ್ ಸನ್ಯಾಸಿ ಸ್ವಾಮಿ ಲಲಿತಾನಂದ ಗಿರಿ ಅವರು ಆ ಸಂದೇಶವನ್ನು ಓದಿ ವಿವರಿಸಿದರು (ಕೆಳಗೆ ನೋಡಿ).

ಹದಿಹರೆಯದವರ ಆಧ್ಯಾತ್ಮಿಕ ತರಬೇತಿ

ಸಾಮೂಹಿಕ ಧ್ಯಾನಗಳು ಮತ್ತು ತಂತ್ರಗಳ ಪುನರಾವಲೋಕನ ತರಗತಿಗಳು

ಹುಡುಗರ ಶಿಬಿರದ ಪ್ರತಿ ದಿನವೂ ದಿನಕ್ಕೆ ಎರಡು ಬಾರಿ ಚೈತನ್ಯದಾಯಕ ವ್ಯಾಯಾಮಗಳ ಸಾಮೂಹಿಕ ಅಭ್ಯಾಸ ಮತ್ತು ಧ್ಯಾನದಿಂದ ಆರಂಭವಾಗಿ ಮುಕ್ತಾಯಗೊಳ್ಳುತ್ತಿತ್ತು.

ಸ್ವಾಮಿ ನಿರ್ಮಲಾನಂದರು ಚೈತನ್ಯದಾಯಕ ವ್ಯಾಯಾಮಗಳ ಕುರಿತು ಪುನರಾವಲೋಕನ ತರಗತಿಯನ್ನು ನಡೆಸಿಕೊಟ್ಟರು.
ಸ್ವಾಮಿ ಶಂಕರಾನಂದರು ಹೊರಾಂಗಣ ಧ್ಯಾನವನ್ನು ಮುನ್ನಡೆಸಿದರು.

ಹೇಗೆ ಬದುಕುವುದು ಕುರಿತ ತರಗತಿಗಳು

ಸ್ವಾಮಿಗಳಾದ ಲಲಿತಾನಂದರು ಮತ್ತು ನಿರ್ಮಲಾನಂದರು ವಿಶ್ವವಿದ್ಯಾಲಯದ ವಿಚಾರ ಸಂಕಿರಣ ಸಭಾಂಗಣಗಳಲ್ಲಿ “ಅಂತಃಪ್ರಜ್ಞೆ” ಮತ್ತು “ನಿರ್ಭಯತೆ” ಕುರಿತಂತೆ ಸಂವಾದಾತ್ಮಕ ತರಗತಿಗಳನ್ನು ನಡೆಸಿಕೊಟ್ಟರು. ಹೆಚ್ಚುವರಿಯಾಗಿ, ಅನುಭವಿ ತಂಡದ ನಾಯಕರು “ಇಚ್ಛಾಶಕ್ತಿ” ಯಂತಹ ಇತರ ಉಪಯುಕ್ತ ವಿಷಯಗಳ ಕುರಿತು ಚರ್ಚಿಸಿದರು.

ದೈನಂದಿನ ಆತ್ಮಾವಲೋಕನ

ಮಕ್ಕಳು ಪ್ರತಿದಿನ ತಮ್ಮ ವಸತಿ ಕೊಠಡಿಗಳಲ್ಲಿ ಗುರು ಕಥಾ (ವೈಎಸ್‌ಎಸ್‌ನ ಆರು ಗುರುಗಳ ಜೀವನದ ಕಥೆಗಳು) ಕುರಿತ ಸಾಮೂಹಿಕ ಕೂಟ, ಗೀತಾ ಜಪ, ಸಾಂಸ್ಕೃತಿಕ ಕಾರ್ಯಕ್ರಮಗಳ ಅಭ್ಯಾಸ ಮತ್ತು ಆತ್ಮಾವಲೋಕನ (ಆತ್ಮಾವಲೋಕನ ಪಟ್ಟಿಯ ಸಹಾಯದಿಂದ) ಇವುಗಳ ಮೂಲಕ ದಿನವನ್ನು ಮುಕ್ತಾಯಗೊಳಿಸುತ್ತಿದ್ದರು. ಯುವ ಮನಸ್ಸುಗಳಲ್ಲಿ ತಮ್ಮ ದೈನಂದಿನ ಜೀವನದ ಪ್ರತಿಯೊಂದು ಅಂಶವನ್ನೂ ಆಧ್ಯಾತ್ಮಿಕಗೊಳಿಸುವ ವಿಧಾನಗಳನ್ನು ಬೆಳೆಸುವ ಪ್ರಯತ್ನ ಇದಾಗಿತ್ತು.

ಬಾಬಾಜಿಯ ಗುಹೆ

ಮಕ್ಕಳ ನೆಚ್ಚಿನ ಚಟುವಟಿಕೆಗಳಲ್ಲಿ ಒಂದೆಂದರೆ, ಅರಣ್ಯದ ಒಂದು ಪ್ರಶಾಂತವಾದ ಭಾಗದಲ್ಲಿ ನೈಜ ಗಾತ್ರದ ಬಾಬಾಜಿಯವರ ಪ್ರತಿಮೆಯನ್ನು ಸ್ಥಾಪಿಸಿ ನಿರ್ಮಿಸಲಾದ “ಬಾಬಾಜಿಯವರ ಗುಹೆ”ಯ ಪ್ರತಿಕೃತಿಗೆ ಭೇಟಿ ನೀಡುವುದು.

ಹದಿಹರೆಯದವರು ಮಹಾವತಾರ ಬಾಬಾಜಿಯವರನ್ನು ಕುರಿತು ಜಪಿಸುತ್ತಾರೆ,
ಧ್ಯಾನಿಸುತ್ತಾರೆ ಮತ್ತು ತಮ್ಮ ನೆಚ್ಚಿನ ಕಥೆಗಳನ್ನು ಪರಸ್ಪರ ಹಂಚಿಕೊಳ್ಳುತ್ತಾರೆ.
ಹದಿಹರೆಯದವರ ಗುಂಪು “ಬಾಬಾಜಿಯ ಗುಹೆ” ಪ್ರದೇಶದಲ್ಲಿ ಸೌಹಾರ್ದಯುತ ಸಮಯವನ್ನು ಆನಂದಿಸುತ್ತದೆ.

ಶೈಕ್ಷಣಿಕ ಮತ್ತು ಮನರಂಜನಾ ಚಟುವಟಿಕೆಗಳು

ಹುಡುಗರ ಶಿಬಿರವು ಮಕ್ಕಳು ಮತ್ತು ಹದಿಹರೆಯದವರನ್ನು ಆನಂದದಾಯಕ ರೀತಿಯಲ್ಲಿ ತೊಡಗಿಸಿಕೊಳ್ಳುವ ಜೊತೆಗೆ ಅವರಲ್ಲಿ ಶಿಸ್ತು ಮತ್ತು ಆತ್ಮಾವಲೋಕನವನ್ನು ಬೆಳೆಸುವ ವ್ಯಾಪಕ ಶ್ರೇಣಿಯ ಚಟುವಟಿಕೆಗಳನ್ನು ಒಳಗೊಂಡಿತ್ತು.

ಆವರಣ ಪ್ರವಾಸ

ಆವರಣದ ಪ್ರವಾಸಗಳು ಹಿರಿಯ ಹುಡುಗರಿಗೆ ಆಧುನಿಕ ವಿಜ್ಞಾನ ಜಗತ್ತಿನ ಒಂದು ಕುತೂಹಲಕಾರಿ ನೋಟವನ್ನು ಒದಗಿಸುತ್ತವೆ.

ಕ್ರೀಡೆ ಮತ್ತು ಆಟಗಳು

ಕ್ರೀಡೆಗಳಲ್ಲಿ ಟೇಬಲ್ ಟೆನಿಸ್, ಕ್ರಿಕೆಟ್, ಸಾಕರ್ ಮತ್ತು ಹುಡುಗರಿಗಾಗಿ ಇತರ ಆಟಗಳು ಸೇರಿವೆ.

ಕಾಡಿನಲ್ಲಿ ನಡಿಗೆ

ಕಾಡಿನ ಹಾದಿಗಳಲ್ಲಿ ನಡಿಗೆ, ಇದು ಹಿರಿಯ ಹದಿಹರೆಯದವರಲ್ಲಿ ಬಹಳ ಜನಪ್ರಿಯವಾದ ಚಟುವಟಿಕೆಯಾಗಿದೆ.

ಅರಣ್ಯೀಕರಣ ಅಭಿಯಾನ

ಶಿಬಿರಾರ್ಥಿಗಳು ಕಾಡಿನಲ್ಲಿ ಗಿಡಗಳನ್ನು ನೆಡುವುದನ್ನು ಆನಂದಿಸುತ್ತಾರೆ, ಪ್ರತಿ ಸಸಿಗೂ ತಮ್ಮ ಹೆಸರಿನ ಚೀಟಿಯನ್ನು ಲಗತ್ತಿಸಲಾಗುತ್ತದೆ. ಮುಂದಿನ ವರ್ಷ ಶಿಬಿರಕ್ಕೆ ಬಂದಾಗ, ಅವರು ತಮ್ಮ ಮರಗಳ ಬೆಳವಣಿಗೆಯನ್ನು ಪರಿಶೀಲಿಸಬಹುದು.

ಬೇಯಿಸುವ ಕಲೆ

ಹದಿಹರೆಯದವರು ಆಹಾರ ಪ್ರಯೋಗಾಲಯದಲ್ಲಿ ಬೇಯಿಸುವ ಕಲೆಯನ್ನು ಕಲಿಯುತ್ತಾರೆ.

ಕಲೆ ಮತ್ತು ಕರಕುಶಲತೆ

ಹುಡುಗರು ಅಲಂಕೃತ ಚಿತ್ರಚೌಕಟ್ಟುಗಳನ್ನು ತಯಾರಿಸುತ್ತಾರೆ…
...ಮತ್ತು ಅವುಗಳಲ್ಲಿ ತಮ್ಮ ಸಮೂಹದ ಭಾವಚಿತ್ರವನ್ನು ಅಂಟಿಸುತ್ತಾರೆ.

ಕುಟುಂಬ ಶೈಲಿಯ ಸಮೂಹ ಭೋಜನ

ಕುಟುಂಬದ ಭಾವನೆಯನ್ನು ಮೂಡಿಸಲು, ಪ್ರತಿ ಸಮೂಹದಲ್ಲಿ 3 ವಯಸ್ಕ ತಂಡದ ನಾಯಕರೊಡನೆ 9 ಶಿಬಿರಾರ್ಥಿಗಳು ಪ್ರತಿದಿನ ಮೂರು ಬಾರಿ ಒಟ್ಟಿಗೆ ಭೋಜನ ಮಾಡಿದರು. ಯೋಗಿಕ ತತ್ವಗಳಿಗೆ ಅನುಗುಣವಾಗಿ, ಅವರು ಮೌನವಾಗಿ ಊಟ ಮಾಡಿದರು, ಜೊತೆಗೆ ಪರಸ್ಪರ ಸೇವೆ ಮಾಡಿಕೊಂಡರು ಮತ್ತು ಊಟದ ನಂತರ ಸ್ವಚ್ಛಗೊಳಿಸುವಲ್ಲಿ ಸಹಾಯ ಮಾಡಿದರು.

ಸ್ವಾಮಿ ನಿರ್ಮಲಾನಂದರು ಊಟಕ್ಕೂ ಮುನ್ನ ಬಾಲಕರನ್ನು ಪ್ರಾರ್ಥನೆಯಲ್ಲಿ ಮುನ್ನಡೆಸುತ್ತಾರೆ.
ಮಕ್ಕಳ ಇಷ್ಟಕ್ಕೆ ತಕ್ಕಂತಹ ಸಾತ್ತ್ವಿಕ ಆಹಾರದಿಂದ ಕೂಡಿದ ವಿಶೇಷ ಭೋಜನವನ್ನು,
ಶಿಬಿರದ ಅವಧಿಯಲ್ಲಿ ಪ್ರೀತಿಯಿಂದ ಒದಗಿಸಲಾಗುತ್ತದೆ.

ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಉತ್ಸವಗಳು

ಸಾಂಸ್ಕೃತಿಕ ಕಾರ್ಯಕ್ರಮ

ಗುರೂಜಿಯವರ ಬೋಧನೆಗಳ ಕಥೆಗಳನ್ನು ಆಧರಿಸಿದ ವಿವಿಧ ಕಾರ್ಯಕ್ರಮಗಳನ್ನು ಶಿಬಿರಾರ್ಥಿಗಳು ಸಂಜೆಯ ವೇಳೆ ಪ್ರದರ್ಶಿಸಿದರು. ವಿವಿಧ ವಾದ್ಯೋಪಕರಣಗಳೊಂದಿಗೆ ದಿವ್ಯ ಗೀತೆಗಳ ಸಮೂಹ ಗಾಯನವೂ ಈ ಕಾರ್ಯಕ್ರಮದ ವಿಶೇಷವಾಗಿತ್ತು (ಕೆಳಗೆ ನೋಡಿ)

ಆಧ್ಯಾತ್ಮಿಕ ಮೇಳ

ಶಿಬಿರದ ಕೊನೆಯ ದಿನದಂದು, ಉನ್ನತ ದ್ವಾಪರ ಯುಗದ ಜೀವನವನ್ನು ಕಲ್ಪಿಸಿಕೊಳ್ಳಲು ತಂಡದ ನಾಯಕರು ಸೃಜನಶೀಲ ಕಾರ್ಯಕ್ರಮವನ್ನು ಆಯೋಜಿಸಿದರು. ಮಕ್ಕಳು ಅಂತಃಪ್ರಜ್ಞೆ, ಮನಸ್ಸನ್ನು ಓದುವುದು, ಸ್ಮರಣೆ ಮತ್ತು ತಂಡದ ಕೆಲಸ ಇವುಗಳನ್ನು ಕೇಂದ್ರವಾಗಿರಿಸಿಕೊಂಡ ಆಟಗಳನ್ನು ಆಡಿದರು. ಆಧ್ಯಾತ್ಮಿಕ ಮೇಳವು ಬಹಳ ಯಶಸ್ವಿಯಾಯಿತು!

ಆಟವೊಂದರಲ್ಲಿ ಮಗ್ನರಾಗಿರುವ ಮಕ್ಕಳು.
ಎಸ್‌ಆರ್‌ಎಫ್‌ ಇಂದ ಭೇಟಿ ನೀಡಿರುವ ಸ್ವಾಮಿ ನಿಷ್ಠಾನಂದರು,
ಹದಿಹರೆಯದವರೊಂದಿಗೆ ಆಧ್ಯಾತ್ಮಿಕ ಮೇಳದಲ್ಲಿ ಪಾಲ್ಗೊಳ್ಳುತ್ತಾರೆ.

ಅನಿಸಿಕೆಗಳು

ಬಾಲಕಿಯರ ಶಿಬಿರ

ಉದ್ಘಾಟನಾ ಕಾರ್ಯಕ್ರಮ

ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ವೈಎಸ್ಎಸ್/ಎಸ್‌ಆರ್‌ಎಫ್‌ ಅಧ್ಯಕ್ಷರು ಮತ್ತು ಆಧ್ಯಾತ್ಮಿಕ ಮುಖ್ಯಸ್ಥರಾದ ಶ್ರೀ ಶ್ರೀ ಸ್ವಾಮಿ ಚಿದಾನಂದ ಗಿರಿಜೀಯವರ ಸಂದೇಶವನ್ನು ಸ್ವಾಮಿ ಲಲಿತಾನಂದರು ವಾಚಿಸಿದರು.

ಹದಿಹರೆಯದವರ ಆಧ್ಯಾತ್ಮಿಕ ತರಬೇತಿ

ಸಮೂಹ ಧ್ಯಾನಗಳು ಮತ್ತು ತಂತ್ರ ಪರಿಶೀಲನಾ ತರಗತಿಗಳು

ಬಾಲಕಿಯರ ಶಿಬಿರದಲ್ಲಿ ಪ್ರತಿದಿನದ ಆರಂಭ ಮತ್ತು ಅಂತ್ಯದಲ್ಲಿ ಚೈತನ್ಯದಾಯಕ ವ್ಯಾಯಾಮಗಳು ಹಾಗೂ ಧ್ಯಾನದ ಸಮೂಹ ಅಭ್ಯಾಸವು ದಿನಕ್ಕೆ ಎರಡು ಬಾರಿ ನಡೆಯಿತು.

ಚೈತನ್ಯದಾಯಕ ವ್ಯಾಯಾಮಗಳಲ್ಲಿ ಬೋಧಿಸಿದಂತೆ, ಬ್ರಹ್ಮಾಂಡದ ಶಕ್ತಿಯಿಂದ ದೇಹವನ್ನು
ಮರುಪೂರಣಗೊಳಿಸುವ ಕಲೆಯನ್ನು ಸ್ವಾಮಿ ಲಲಿತಾನಂದರು ವಿವರಿಸಿದರು.
ಹಾಂಗ್-ಸಾ ತಂತ್ರದ ಪರಿಶೀಲನಾ ತರಗತಿಗೆ ಮುನ್ನ ಸ್ವಾಮಿ ಶಂಕರಾನಂದರು ಪ್ರಾರ್ಥನೆ ಮಾಡುತ್ತಾರೆ

ಹೇಗೆ ಬದುಕುವುದು ಕುರಿತ ತರಗತಿಗಳು

ಹದಿಹರೆಯದವರ ಚರ್ಚೆಗಳನ್ನು ಮುನ್ನಡೆಸಲು ವಿಶೇಷವಾಗಿ ತರಬೇತಿ ಪಡೆದ ಅನುಭವಿ ಶಿಕ್ಷಕರು, ಒಳಾಂಗಣ ಹಾಗೂ ಹೊರಾಂಗಣ ಎರಡೂ ಸ್ಥಳಗಳಲ್ಲಿ ಸ್ನೇಹ, ಇಚ್ಛಾಶಕ್ತಿ ಮತ್ತು ಸಹಾನುಭೂತಿಯಂತಹ ವಿಷಯಗಳ ಕುರಿತು ತರಗತಿಗಳನ್ನು ನಡೆಸಿದರು (ಕೆಳಗೆ ತೋರಿಸಿರುವಂತೆ).

ಬಾಬಾಜಿಯವರ ಗುಹೆ

ಬಾಲಕಿಯರ ವಸತಿ ಪ್ರದೇಶದಲ್ಲಿ ಪ್ರತ್ಯೇಕವಾದ “ಬಾಬಾಜಿಯವರ ಗುಹೆ” ವ್ಯವಸ್ಥೆಯನ್ನು ಕಲ್ಪಿಸಲಾಗಿದ್ದು, ಇದು ಅವರ ಬಳಕೆಗಾಗಿ ಮಾತ್ರ ಇತ್ತು. ಅಲ್ಲಿ ತಂಡದ ನಾಯಕರು ಅವರಿಗೆ ಜಪ, ಧ್ಯಾನ ಮತ್ತು ಕಥೆ ಹೇಳುವುದನ್ನು ಮುನ್ನಡೆಸಿದರು.

ಶೈಕ್ಷಣಿಕ ಮತ್ತು ಮನರಂಜನಾ ಚಟುವಟಿಕೆಗಳು

ಬಾಲಕಿಯರ ಶಿಬಿರದಲ್ಲಿ ಮಕ್ಕಳು ಮತ್ತು ಹದಿಹರೆಯದವರನ್ನು ಮನರಂಜನೆಯೊಂದಿಗೆ ತೊಡಗಿಸಿಕೊಳ್ಳುವ ಹಾಗೂ ಅವರಲ್ಲಿ ಶಿಸ್ತು ಮತ್ತು ಆತ್ಮಾವಲೋಕನವನ್ನು ಬೆಳೆಸುವ ವೈವಿಧ್ಯಮಯ ಚಟುವಟಿಕೆಗಳೂ ನಡೆದವು.

ಆವರಣ ಪ್ರವಾಸ

ಆವರಣ ಪ್ರವಾಸದ ಸಂದರ್ಭದಲ್ಲಿ, ಹಿರಿಯ ಹದಿಹರೆಯದವರಿಗೆ ವಿಜ್ಞಾನ ಮತ್ತು
ಕಲೆಗಳ ಕ್ಷೇತ್ರಗಳಲ್ಲಿನ ಸಂಶೋಧನಾ ಅವಕಾಶಗಳನ್ನು ಪರಿಚಯಿಸಲಾಯಿತು.

ಕ್ರೀಡೆ ಮತ್ತು ಆಟಗಳು

ಬಾಲಕಿಯರ ಕ್ರೀಡಾ ಚಟುವಟಿಕೆಗಳಲ್ಲಿ ಬ್ಯಾಡ್ಮಿಂಟನ್, ಬಾಸ್ಕೆಟ್‌ಬಾಲ್, ಥ್ರೋಬಾಲ್
ಮತ್ತು ಫ್ರಿಸ್ಬೀ ಸೇರಿದಂತೆ, ಇತರ ಅನೇಕ ಒಳಾಂಗಣ ಆಟಗಳೂ ಸೇರಿದ್ದವು.

ಕಾಡಿನಲ್ಲಿ ನಡಿಗೆ

ಹದಿಹರೆಯದವರು ಧ್ಯಾನ ಮತ್ತು ಹೊರಾಂಗಣ ಭೋಜನವನ್ನು ಒಳಗೊಂಡ ಪ್ರಕೃತಿ ಸೊಬಗಿನ ನಡಿಗೆಗಳಲ್ಲಿ ಪಾಲ್ಗೊಂಡರು.

ಬೇಯಿಸುವ ಕಲೆ

ಬಾಲಕಿಯರು ಆಹಾರ ಪ್ರಯೋಗಾಲಯದಲ್ಲಿ ಬಿಸ್ಕತ್ತುಗಳನ್ನು ತಯಾರಿಸುವ ಕಲೆಯನ್ನು ಕಲಿತರು.

ಕಲೆ ಮತ್ತು ಕರಕುಶಲತೆ

ವಿಶ್ವವಿದ್ಯಾನಿಲಯದ ನಿವಾಸಿ ಕಲಾವಿದರು ಬಂಡೆಯ ಮೇಲೆ ಚಿತ್ರಕಲೆ ತರಗತಿಗಳನ್ನು ನಡೆಸಿಕೊಟ್ಟರು. ಶಿಬಿರಾರ್ಥಿಗಳು ತಾವು ಚಿತ್ರ ಬಿಡಿಸಿದ ಬಂಡೆಗಳನ್ನು…

…ಮತ್ತಿತರ ಕಲಾ ಮತ್ತು ಕರಕುಶಲ ವಿನ್ಯಾಸಗಳನ್ನು ಪ್ರದರ್ಶಿಸುತ್ತಾರೆ.

ಕುಟುಂಬ ಶೈಲಿಯ ಗುಂಪು ಊಟ

ಬಾಲಕರ ಶಿಬಿರದಂತೆಯೇ, 9 ಶಿಬಿರಾರ್ಥಿಗಳು ಮತ್ತು 3 ವಯಸ್ಕ ತಂಡದ ನಾಯಕರಿರುವ ಪ್ರತಿಯೊಂದು ಗುಂಪು, ಕುಟುಂಬದ ಭಾವನೆಯನ್ನು ಮೂಡಿಸಲು ಪ್ರತಿದಿನ ಮೂರು ಬಾರಿ ಒಟ್ಟಾಗಿ ಊಟ ಮಾಡಿತು. ಯೋಗ ತತ್ವಗಳಿಗೆ ಅನುಗುಣವಾಗಿ, ಅವರು ಮೌನವಾಗಿ ಊಟ ಮಾಡಿದರು ಮತ್ತು ಪರಸ್ಪರ ಸೇವೆ ಮಾಡಿಕೊಳ್ಳುವುದರ ಜೊತೆಗೆ ನಂತರ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡಿದರು.

ಕುಟುಂಬ ಶೈಲಿಯ ಗುಂಪು ಊಟದಲ್ಲಿ ಬಾಲಕಿಯರು ಮೌನವಾಗಿ ರುಚಿಕರವಾದ ಭೋಜನವನ್ನು ಸವಿದರು.
ಊಟದ ಸಮಯದಲ್ಲಿ ಪರಸ್ಪರ ಸೇವೆ ಮಾಡಲು ಕಲಿಯುವುದು ಮತ್ತು ಸ್ನೇಹದ ಬಂಧಗಳನ್ನು ಬೆಳೆಸುವುದು

ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಉತ್ಸವಗಳು

ಸಾಂಸ್ಕೃತಿಕ ಕಾರ್ಯಕ್ರಮ

ಶಿಬಿರದ ಕೊನೆಯ ದಿನದಂದು ಬಾಲಕಿಯರಿಂದ ಅತ್ಯಂತ ಸುಂದರವಾಗಿ ನೃತ್ಯ ಸಂಯೋಜನೆಗೊಂಡ ಸಾಂಸ್ಕೃತಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸಲಾಯಿತು.

ಆಧ್ಯಾತ್ಮಿಕ ಮೇಳ

ಬಾಲಕರ ಶಿಬಿರದಲ್ಲಿ ತಂಡದ ನಾಯಕರು ಭವಿಷ್ಯದ ದ್ವಾಪರ ಯುಗದ ಸನ್ನಿವೇಶವನ್ನು ಸೃಷ್ಟಿಸಿದರೆ, ಬಾಲಕಿಯರ ಶಿಬಿರದಲ್ಲಿ ಗುಂಪು ನಾಯಕರು ಶಿಬಿರಾರ್ಥಿಗಳನ್ನು ಕೊನೆಯ ಅವರೋಹಣ ದ್ವಾಪರ ಯುಗದ ಕಾಲಕ್ಕೆ, ಅಂದರೆ ಭಗವಾನ್ ಕೃಷ್ಣನ ಕಾಲಕ್ಕೆ ಕೊಂಡೊಯ್ದರು. ಗೋಪಿಕೆಯರಂತೆ ವೇಷಭೂಷಣ ಧರಿಸಿದ ಶಿಬಿರಾರ್ಥಿಗಳು ಸರಳ ಆಟಗಳನ್ನು ಆಡಿದರು ಮತ್ತು ರಾಸಲೀಲೆಯ ಆನಂದದಾಯಕ ಭಕ್ತಿಪೂರ್ವಕ ಮರುಸೃಷ್ಟಿಯೊಂದಿಗೆ ಕಾರ್ಯಕ್ರಮವನ್ನು ಮುಕ್ತಾಯಗೊಳಿಸಿದರು.

ಅನಿಸಿಕೆಗಳು

para-ornament

ಮುಕ್ತಾಯ ಕಾರ್ಯಕ್ರಮಕ್ಕೆ ವಿಶೇಷ ಅತಿಥಿ

ವೈಎಸ್‌ಎಸ್‌ನ ಹಿರಿಯ ಸನ್ಯಾಸಿಯಾದ ಸ್ವಾಮಿ ಸ್ಮರಣಾನಂದಜಿಯವರು ಬಾಲಕರ ಮತ್ತು ಬಾಲಕಿಯರ ಶಿಬಿರಗಳೆರಡರ ಸಮಾರೋಪ ಸಮಾರಂಭದ ಮುಖ್ಯ ಅತಿಥಿಗಳಾಗಿದ್ದರು. ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ ಪರವಾಗಿ, ವೈಎಸ್‌ಎಸ್‌ನ ಮಕ್ಕಳ ಮತ್ತು ಹದಿಹರೆಯದವರ ಎರಡು ಶಿಬಿರಗಳನ್ನು ಯಶಸ್ವಿಯಾಗಿ ಮತ್ತು ಏಕಕಾಲದಲ್ಲಿ ನಡೆಸಲು ತಮ್ಮ ವಿಶ್ವವಿದ್ಯಾನಿಲಯ, ಅದರ ಸೌಲಭ್ಯಗಳು ಮತ್ತು ಸಿಬ್ಬಂದಿ ಸಹಾಯವನ್ನು ಲಭ್ಯವಾಗುವಂತೆ ಮಾಡಿದ ಅವರ ಅನುಗ್ರಹಪೂರ್ಣ ಬೆಂಬಲಕ್ಕಾಗಿ ಅವರು ಖೋಸ್ಲಾ ಕುಟುಂಬವನ್ನು ಅಭಿನಂದಿಸಿದರು ಮತ್ತು ಹೃತ್ಪೂರ್ವಕ ಧನ್ಯವಾದಗಳನ್ನು ಅರ್ಪಿಸಿದರು.

ಮುಕ್ತಾಯ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ದೇವರು ನೀಡಿರುವ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ಸಂತೋಷದ ಹಾಗೂ ಯಶಸ್ವಿ ಜೀವನವನ್ನು ನಡೆಸುವಂತೆ ಶಿಬಿರಾರ್ಥಿಗಳನ್ನು ಪ್ರೇರೇಪಿಸುವ ಸಂದೇಶವನ್ನು ನೀಡಿದರು. ಸೇಬಿನ ಬೀಜವೊಂದನ್ನು ಕೈಯಲ್ಲಿ ಹಿಡಿದು, ಒಂದು ಸಣ್ಣ ಬೀಜವು ಬೆಳೆದು ಅನೇಕ ಹಣ್ಣುಗಳನ್ನು ನೀಡುವ ಬೃಹತ್ ಮರವಾಗುವಂತೆ, ಅವರ ಜೀವನವೂ ತಮಗೂ ಹಾಗೂ ಸಮಾಜಕ್ಕೂ ಫಲಪ್ರದವಾಗಿರಬೇಕು ಎಂದು ಸ್ವಾಮಿ ಸ್ಮರಣಾನಂದರು ಶಿಬಿರಾರ್ಥಿಗಳಿಗೆ ತಿಳಿಸಿದರು.

ಸ್ವಾಮಿ ಸ್ಮರಣಾನಂದರು ಖೋಸ್ಲಾ ಕುಟುಂಬವನ್ನು ಸನ್ಮಾನಿಸಿದರು…
…ಹಾಗೆಯೇ ತಮ್ಮ ಮುಕ್ತಾಯ ಭಾಷಣದ ಮೂಲಕ ಶಿಬಿರಾರ್ಥಿಗಳಿಗೆ ಸ್ಫೂರ್ತಿ ನೀಡಿದರು.

ಗುರುಗಳ ರಕ್ಷಣೆಯ ಛತ್ರಿ

ಶಿಬಿರಗಳು ಆರಂಭವಾಗುವ ಮುನ್ನದ ದಿನಗಳಲ್ಲಿ, ಸೋಲನ್ ಪಟ್ಟಣದಲ್ಲಿ ಉಷ್ಣ ಹವಾಮಾನವಿದ್ದು, ದೂರದಲ್ಲಿ ಕಾಡ್ಗಿಚ್ಚುಗಳು ಕಾಣಿಸುತ್ತಿದ್ದವು. ಶಿಬಿರಗಳ ಉದ್ಘಾಟನಾ ದಿನದಂದು, ಮೋಡಗಳು, ಮಳೆ ಮತ್ತು ತಂಪಾದ ತಂಗಾಳಿಯ ರೂಪದಲ್ಲಿ ಗುರುಗಳ ರಕ್ಷಣೆಯ ಛತ್ರಛಾಯೆ ಆವರಿಸಿತು. ವಾರವಿಡೀ ಆಗಾಗ ಸುರಿದ ಮಳೆ ಹಾಗೂ ಮೋಡ ಕವಿದ ವಾತಾವರಣದ ನಡುವೆಯೂ, ಕಾರ್ಯಕ್ರಮಗಳು ಆಹ್ಲಾದಕರ ವಾತಾವರಣದಲ್ಲಿ ಮುಂದುವರಿದವು. ಆಶ್ಚರ್ಯಕರವೆಂದರೆ, ಶಿಬಿರಗಳು ಮುಗಿದ ಮರುದಿನವೇ ಸೂರ್ಯನು ಮತ್ತೆ ಪ್ರಖರವಾಗಿ ಬೆಳಗಿದನು!

ಆಧುನಿಕ ಸೌಲಭ್ಯಗಳಿರುವ ಸುಂದರವಾದ ಹಿಮಾಲಯದ ಆವರಣದಲ್ಲಿ ನಡೆದ ಈ ಐತಿಹಾಸಿಕ ವೈಎಸ್‌ಎಸ್ ಶಿಬಿರದ ಅಪಾರ ಯಶಸ್ಸು ಸ್ವಯಂಸೇವಕರು ಮತ್ತು ತಂಡದ ನಾಯಕರ ಬೆಂಬಲದಿಂದ ಹಾಗೂ ಮಹಾನ್ ಗುರುಗಳ ಬಹಿರಂಗ ಮತ್ತು ಗುಪ್ತ ಆಶೀರ್ವಾದದಿಂದ ಸಾಧ್ಯವಾಯಿತು.

ಶಿಬಿರಾರ್ಥಿಗಳ ಕೃತಜ್ಞತೆಯು ಕೆಳಗಿನ ಭಾವಚಿತ್ರದಲ್ಲಿ ವ್ಯಕ್ತವಾಗಿದೆ, ಅಲ್ಲಿ ಬಾಲಕಿಯರು “ದೇವರೊಂದಿಗೆ ಎಲ್ಲವೂ ಸಾಧ್ಯ!” ಎಂಬ ಫಲಕದತ್ತ ಕೈಯಿಟ್ಟು ತೋರಿಸುತ್ತಿದ್ದಾರೆ.

para-ornament

ಇದನ್ನು ಹಂಚಿಕೊಳ್ಳಿ